ಯತಿ ಸ್ವಂತೀ 304
01-11-2018 ವಿಜಯವಾಡಕ್ಕೆ ಹೋಗೆಂದರು ಬೆಂಗಳೂರು ಆಫೀಸ್ನಲ್ಲಿ. ಬೆಂಗಳೂರಿನಿಂದ ಪ್ರಶಾಂತಿ ಎಕ್ಸ್ಪ್ರೆಸ್ ಮಧ್ಯಾಹ್ನ ಎರಡು ಗಂಟೆಗೆ ಹತ್ತಿದೆ. ಮೊಬೈಲ್ನಲ್ಲಿ ಸಿನಿಮಾಗಳು, ನನ್ನ ಫೇವರಿಟ್ ಹಿಂದೀ, ಕನ್ನಡ ಹಾಡುಗಳು, ಒಳ್ಳೆಯ ಪುಸ್ತಕಗಳು ಇವೆಲ್ಲವೂ ನನ್ನ ಗೆಳೆಯರು (ಗೆಳತಿಯರು!). ವಿಜಯವಾಡವನ್ನು ಮರುದಿನ ಬೆಳಗ್ಗೆ ಐದೂವರೆಗೆ ತಲುಪಿದೆ. ಹೊಟೇಲ್ ತಲುಪಿ, ವಿಶ್ರಾಂತಿ ಪಡೆದು, ನನ್ನ ಹೊಟೇಲ್ ಇದ್ದ ಏಲೂರು ರಸ್ತೆಯಲ್ಲಿಯೇ ಇದ್ದ ತರಬೇತಿ ಕೇಂದ್ರಕ್ಕೆ ಹೋದೆ. ನಂತರ ಅಲ್ಲಿನ ಸರ್ಕಾರೀ ಅಧಿಕಾರಿಯನ್ನು ಭೇಟಿ ಮಾಡಿದೆ. ನಾನು ತೆಲುಗು ಭಾಷೆಯಲ್ಲಿ ಪಟಪಟನೆ ಮಾತನಾಡಿದ್ದು ಆ ಅಧಿಕಾರಿಯನ್ನು ಇಂಪ್ರೆಸ್ ಮಾಡಿತು. ಯಂಡಮೂರಿ ವೀರೇಂದ್ರನಾಥ್ ಅವರ ಪರಿಚಯ ಇದೆ ಎಂದೊಡನೆ ಅವರ ದೃಷ್ಟಿಯಲ್ಲಿ ನನ್ನ ಲೆವೆಲ್ ಹೆಚ್ಚಾಯಿತು ಎನಿಸಿತ್ತು! ನನ್ನ ವಿಶಾಖಪಟ್ಟಣಂ ಸಹೋದ್ಯೋಗಿ ಬಂದ. ಆತನಿಗೆ ಆ ಸರ್ಕಾರಿ ಅಧಿಕಾರಿಯ ಪರಿಚಯವಿತ್ತು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಬೇಕಾಯಿತು. ಆಗೊಂದು ವಿಶೇಷ ನಡೆಯಿತು. ನಾನು ಆಂಗ್ಲ ಭಾಷೆಯಲ್ಲಿ ಭಾಷಣ ಶುರು ಮಾಡುತ್ತಿದ್ದೆ. ನನಗೆ ಅಧಿಕಾರಿಗಳು ಹೇಳಿದ್ದರಿಂದ ಇಂಗ್ಲಿಷ್ ಭಾಷೆ ಬಳಕೆ ಮಾಡುತ್ತಿದ್ದೆ. ಸುಮ್ಮನೆ ಕೂರುತ್ತಿದ್ದರು ಮಕ್ಕಳು. ನಂತರ ತೆಲುಗು ಭಾಷೆ ಆರಂಭಿಸುತ್ತಿದ್ದೆ. ಆಗ ಅವರ ಮೊಗಗಳಲ್ಲಿ ಖುಷಿ ಕಾಣಿಸಲಾರಂಭಿಸುತ್ತಿತ್ತು. ಆಗ ಮೈ ಛಳಿ ಬಿಟ್ಟು ನನ್ನ ಬಳಿ ಮಾತನಾಡುತ್ತಿದ್ದರು.