ಯತಿ ಸ್ವಂತೀ -292
21-10-2018
ಆ ದೇಶದ ಬಗ್ಗೆ ಏನೇನೂ ಗೊತ್ತಿಲ್ಲದೇ ಹೋದೆ. ನಿಜಕ್ಕೂ ಚೆನ್ನಾಗಿ ನೋಡಿಕೊಂಡಿತು ನನ್ನನ್ನು ಈ ದೇಶ. ದೇಶದ ಸುಲ್ತಾನ್ ಭಾರತೀಯ ಸಮುದಾಯಕ್ಕೆ ಸ್ವತಂತ್ರವಾಗಿ ಅವರ ಚೌಕಟ್ಟಿನಲ್ಲಿ ಜೀವಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ನಮ್ಮ ದೇವರ ಗುಡಿ ಕಟ್ಟಿ ಅದರಲ್ಲಿ ಪೂಜೆ ಮಾಡಲು ಅನುಮತಿ ಇರುವುದು ನಿಜವಾಗಿಯೂ ವಿಶೇಷ. ಭಾರತೀಯ ಸಂಗೀತವನ್ನು ಏರ್ಪಡಿಸಲು ಹಾಲ್. ಶನಿವಾರದ ದಿನ ಹನುಮಂತನ ಗುಡಿ ಭಾರತೀಯರಿಂದ ತುಂಬಿ ತುಳುಕುತ್ತಿತ್ತು. ಕೆಲವು ಸಲ ಹಣದ ನಷ್ಟ ಆಗಿದೆ ನನಗೆ. ಆಗೆಲ್ಲ ತಿರುಪತಿ ಹುಂಡಿ ಎಂದುಕೊಂಡು ಆ ನಷ್ಟವನ್ನು ನುಂಗಿ ನಂಜುಂಡನಾಗಿದ್ದೇನೆ. ನನ್ನ ಅತಿ ಕಷ್ಟದ ಸಮಯದಲ್ಲಿ ನನಗೆ ಕೆಲಸ, ಸಂಬಳ ಕೊಟ್ಟು ನನ್ನನ್ನು ಸಾಲದ ಶೂಲದಿಂದ ಬಿಡಿಸಿದ ಒಮಾನ್ ದೇಶಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ನನ್ನ ಮನೆಯವರು ಬರಲಾಗಲಿಲ್ಲ. (ಅಮ್ಮನ ಹೊರತಾಗಿ). ನನ್ನ ಮನಸ್ಸು ಆ ವಿಷಯವನ್ನು ನೆನೆದಾಗ, ನನ್ನ ಬುದ್ಧಿ ಹೇಳುವ ಮಾತಿದು 'ಕೆಲವನ್ನು ಪಡೆಯಲು ಕೆಲವನ್ನು ಕಳೆದುಕೊಳ್ಳಬೇಕು'. ಮನೆಯವರಿಗೆಲ್ಲ ಕೆಲವು ಕಾಣಿಕೆಗಳನ್ನು ಕೊಂಡುಕೊಂಡೆ. ಕೊನೆಗೂ ಕೊನೆಯ ದಿನ ಬಂದಿತು. ನಮ್ಮ ಕಂಪೆನಿ ಪಿ ಆರ್ ಓ ನನ್ನನ್ನು ಕರೆದೊಯ್ದ. ದೇಶದೊಳಗೆ ಮತ್ತೆ ಬರದವರಿಗೆ ಏರ್ಪೋರ್ಟ್ನಲ್ಲಿ ಒಂದು ಗೇಟ್ ಇದೆ. ಆ ಗೇಟ್ನಲ್ಲಿ ನನ್ನನ್ನು ಕಳಿಸಿದರು ವಿಮಾನಾಶ್ರಯದಲ್ಲಿ. ಪಾಸ್ಪೋರ್ಟ್ನಲ್ಲಿದ್ದ ನನ್ನ ಒಮಾನ್ ವೀಸಾ ಕ್ಯಾನ್ಸೆಲ್ ಆಯಿತು. ನಾನು ಒಳಗೆ ಹೋಗಿ ವಿಮಾನ ಹತ್ತಿದೆ. ಬೈ ಬೈ ಒಮಾನ್! ಹಲೋ ಬೆಂಗಳೂರು!
Comments
Post a Comment