Posts

Showing posts from January, 2018

ಯತಿ ಸ್ವಂತೀ -32

01-02-2018 ನನ್ನ ಅನೇಕ ಪ್ರಯಾಣಗಳಲ್ಲಿ ವಿಜಯವಾಡದ ಪ್ರಯಾಣವು ವಿಶೇಷ ಎನ್ನಬೇಕು. ಅದೆಷ್ಟು ಸಲ ಆ ಊರಿಗೆ ಹೋದೆನೋ, 2009ರಲ್ಲಿ... ಸರಿಯಾಗಿ ನೆನಪಿಲ್ಲ. ಒಮ್ಮೆ ಹೀಗಾಯಿತು. ವಿಜಯವಾಡದಿಂದ ಸಂಜೆ ಏಳು ಗಂಟೆಗೆ ಹೊರಟೆ. ಪ್ರಶಾಂತಿ ಎಕ್ಸ್‍ಪ್ರೆಸ್. ಪ್ರಶಾಂತಿ ಅನ್ನೋ ಹೆಸರು ಹೇಗೆ ಬಂತು ಅನ್ನೋ ಕುತೂಹಲ ಇದ್ದರೆ ಕೇಳಿ. ಪುಟ್ಟಪರ್ತಿ ಅನ್ನೋ ಪುಟ್ಟ ಆದರೆ ಪ್ರಸಿದ್ಧ ಊರಿನ ಬಗ್ಗೆ ಕೇಳಿರುವಿರಾ? ಅದು ಶ್ರೀ ಸತ್ಯ ಸಾಯಿಬಾಬಾ ಅವರ ಆಶ್ರಮವಿರುವ ಊರು. ಈಗ ರೈಲ್ವೇ ನಿಲ್ದಾಣವನ್ನು ಪ್ರಶಾಂತಿ ನಿಲಯ ಎಂದು ಕರೆಯುತ್ತಾರೆ. ಅದಕ್ಕೇ ಈ ರೈಲಿಗೂ ಪ್ರಶಾಂತಿ ಎಕ್ಸ್‍ಪ್ರೆಸ್ ಎಂದು ಹೆಸರು. ಅತ್ಯಂತ ಸ್ವಚ್ಛ ರೈಲು ನಿಲ್ದಾಣವದು. ಸುಮಾರು ರಾತ್ರಿ ಕಳೆದಿತ್ತು. ನಿದ್ರೆ ಕಣ್ಣಿಗೆ ಹತ್ತುತ್ತಲಿತ್ತು. ಆಗ ಇದ್ದಕ್ಕಿದ್ದಂತೆ ಹಾರ್ಮೋನಿಯಂ ಪ್ಯಾಂ ಪ್ಯಾಂ ಎನ್ನುವ ಸದ್ದು ಕೇಳಿ ಬೆಚ್ಚಿ ಕಣ್ಣುಬಿಟ್ಟೆ. ಆರೇಳು ಜನ ನನ್ನ ಬಳಿಯ ಬೆರ್ತ್‍ಗಳಲ್ಲಿ ಕುಳಿತಿದ್ದರು. ವಿವಿಧ ವಯಸ್ಸುಗಳ ಹೆಣ್ಣು, ಗಂಡುಗಳು. ಅವರಲ್ಲಿ ಅತ್ಯಂತ ವಯಸ್ಸಾದ (ಸುಮಾರು ನಲವತ್ತೈದು ಇರಬಹುದು) ವ್ಯಕ್ತಿಯನ್ನು ನೋಡಿ ಒಂದು ಕ್ಷಣ ಬೇಸರವಾಯಿತು. ಅರೆ! ಇದೇನು ಇಷ್ಟು ದೊಡ್ಡ ಕಂಠದಲ್ಲಿ ಹಾಡುತ್ತಿರುವನಲ್ಲಾ... ಉಳಿದವರು ಮಲಗಿದ್ದಾರೆ ಎಂಬ ಪರಿಜ್ಞಾನ ಬೇಡವೇ ಎಂದುಕೊಂಡೆ. ಆಮೇಲೆ ಗೊತ್ತಾಯಿತು ಅವರ ಕಾರ್ಯಕ್ರಮ ಮರುದಿನ ಬೆಳಗ್ಗೆ ಇದ್ದಿದ್ದರಿಂದ ಈ ರೈಲೇ ಅವರ ರಿಹರ್ಸಲ್ ವೇದಿಕೆಯಾಗಿತ್...

ಯತಿ ಸ್ವಂತೀ -31

31-01-2018 1974ರಲ್ಲಿ ನಾನು ಮೈಸೂರಿನ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸೇರಿಕೊಂಡೆ. ದೊಡ್ಡ ಕಟ್ಟಡ. ನಡುವೆ ಖಾಲಿ ಜಾಗ. ಅಲ್ಲೇ ಒಂದು ವೇದಿಕೆ ಕೂಡ ಇತ್ತು. ಪಕ್ಕದಲ್ಲಿ ಅನೇಕ ಪ್ರಯೋಗಶಾಲೆಗಳೂ ಇದ್ದವು. ಹಾಗೆಯೇ ಕ್ಯಾಂಟೀನ್. ನನಗಾಗ 17 ವರ್ಷಗಳು. ಮುಂದೆ ಒಂದು ದೊಡ್ಡ ಗೇಟ್ ಇತ್ತು. ನಮ್ಮ ಸೀನಿಯರ್‍ಗಳು ಆಗಾಗ ಯಾವುದೋ ಒಂದು ಕಾರಣದಿಂದ ಮುಂದಿನ ಗೇಟು ಹಾಕಿಬಿಡುತ್ತಿದ್ದರು. ತಕ್ಷಣವೇ ನಾವು ಒಳಗೆ ಬರದೇ ಖುಷಿಯಿಂದ ಹತ್ತಿರದ ಗಣೇಶ ಟಾಕೀಸಿಗೋ, ಸ್ವಲ್ಪ ದೂರದ ಲಕ್ಷ್ಮಿ, ಗಾಯತ್ರಿ ಅಥವಾ ಶಾಂತಲಾ ಥೇಟರಿಗೋ ಮಾರ್ನಿಂಗ್ ಷೋಗೆ ಹೋಗಿ ನಂತರ ಮನೆಗೆ ಹೋಗಿಬಿಡುತ್ತಿದ್ದೆವು. ಒಮ್ಮೆ ಯಾವುದೋ ಒಂದು ಗಂಭೀರ ವಿಷಯಕ್ಕೆ ಚಳುವಳಿ ಶುರುವಾಯಿತು. ಮೆಡಿಸಿನ್ ಓದಿದವರಿಗೆ ಹೆಚ್ಚು ಸಂಬಳ, ಇಂಜಿನಿಯರಿಂಗ್ ಓದಿದವರಿಗೆ ಕಡಿಮೆ ಸಂಬಳ ಅಂತ. ಸರಿ, ಗೇಟು ಹಾಕಿದರು. ನಾವಂದು ಥಿಯೇಟರಿಗೆ (ಆಗಲೇ!) ಹೋಗಲಾಗಲಿಲ್ಲ. ತಾಯಿಗಿಂತ ದೇವರಿಲ್ಲ, ಮೆಡಿಸಿನ್‍ಗಿಂತ ಕಡಿಮೆ ಇಲ್ಲ ಎಂದು ಘೋಷಣೆ ಕೂಗುತ್ತಾ ಕಾಲೇಜಿನಿಂದ ಹೊರಟು, ಬಲ್ಲಾಳ್ ಹೊಟೇಲ್ ಕಡೆಯಿಂದ ರಾಮಸ್ವಾಮಿ ಸರ್ಕಲ್ ತಲುಪಿ, ಅಲ್ಲಿಂದ ಡಬ್ಬಲ್ ರೋಡ್‍ವರೆಗೆ ಹೋಗಿದ್ದು ನೆನಪು. ಆ ನಂತರ ನಾವು ಗೆಳೆಯರು ಲಕ್ಷ್ಮಿಗೋ, ಗಾಯತ್ರಿಗೋ, ಶಾಂತಲಾಗೋ ಹೋದೆವೇನೋ! ನಮ್ಮ ಕ್ಯಾಂಟೀನ್‍ನಲ್ಲಿ ಶ್ರೀಕಂಠ ಎನ್ನುವ ಬಹಳ ಒಳ್ಳೆಯ ಮನುಷ್ಯನಿದ್ದ. ತಿಂಡಿ ಎಲ್ಲಾ ಓಕೆ. ಕಾಫಿ ವಿಷಯಕ್ಕೆ ಬಂದಾಗ ಸ್ವಲ್ಪ ಹ...

ಯತಿ ಸ್ವಂತೀ -30

30-01-2018 ನನ್ನ ನೆನಪಿನ ಶಕ್ತಿಯ ಬಗ್ಗೆ ನನ್ನ ಕಿರ್ಲೋಸ್ಕರ್ ಸಹೋದ್ಯೋಗಿಗಳಿಗೆ ಚೆನ್ನಾಗಿ ಗೊತ್ತಿದೆ. ಸೇಲ್ಸ್‍ನಲ್ಲಿದ್ದಾಗ ಪ್ರತಿಯೊಂದು ಜನರೇಟರ್‍ನ ಸೀರಿಯಲ್ ನಂಬರ್ ನನಗೆ ನೆನಪಿರುತ್ತಿತ್ತು. ನನ್ನ ಸಹೋದ್ಯೋಗಿಗಳು ಯಾರೂ ಬಾಕ್ಸ್ ಫೈಲುಗಳನ್ನು ನೋಡುತ್ತಿರಲಿಲ್ಲ (ಹೌದು, ಕಂಪ್ಯೂಟರ್ ಆಗ ಇನ್ನೂ ಶೈಶವಾವಸ್ಥೆಯಲ್ಲಿತ್ತು. ಡಿಸೈನ್ ಡಿಪಾರ್ಟ್‍ಮೆಂಟ್‍ನಲ್ಲಿ ಫೋರ್ಟ್‍ರಾನ್ ಫೋರ್ ಎನ್ನುವ ಕಂಪ್ಯೂಟರ್ ಭಾಷೆಯಲ್ಲಿ ಡಿಸೈನ್ ಮಾಡುತ್ತಿದ್ದರು. ಅದು ಒಂದು ಪೋಸ್ಟ್‍ಕಾರ್ಡ್ ತರಹ ಇರುತ್ತಿತ್ತು. ಅದರಲ್ಲಿನ ಪಂಚ್ಡ್ ರಂಧ್ರಗಳ ಮೇರೆಗೆ ಡಿಸೈನ್‍ನ ಪ್ರಿಂಟ್‍ಔಟ್ ಡಾಟ್‍ಮ್ಯಾಟ್ರಿಕ್ಸ್ ಪ್ರಿಂಟರ್‍ನಲ್ಲಿ ಮುದ್ರಿಸಲಾಗುತ್ತಿತ್ತು. ಮೊದಮೊದಲು ಎಚ್.ಎ.ಎಲ್.ನಲ್ಲಿ ಮಾತ್ರವೇ ಪ್ರಿಂಟೌಟ್ ಸಿಗುತ್ತಿತ್ತಂತೆ. ಹ್ಞಾಂ... ನೆನಪಿನ ಶಕ್ತಿ ಎಂದರೆ ಗಮನಿಸುವ ಶಕ್ತಿ. ಬೇಡದ್ದೆಲ್ಲಾ ನನ್ನ ಕಣ್ಣುಗಳಿಗೆ ಬೀಳುತ್ತದೆ. ಅದಕ್ಕೇ ನನ್ನ ಕಥೆಗಳಲ್ಲಿ ಒಂದಿಷ್ಟು ಟ್ವಿಸ್ಟ್, ಸಿನಿಕತೆಯ ಅತಿರೇಕಗಳು ಕೂಡ ಇರುತ್ತವೆ. ಈ ಗಮನಿಸುವಿಕೆಯು ನನಗೆ ಎಷ್ಟು ವರವೋ ಅಷ್ಟೇ ಶಾಪವೂ ಆಗಿದೆ. ರಸ್ತೆಯಲ್ಲಿ ಯಾರಾದರೂ ಇದ್ದಕ್ಕಿದ್ದಂತೆ ತಿರುಗಿದರೆ, ಅದೂ ಸಿಗ್ನಲ್ ಹಾಕದೇ ತಿರುಗಿದರೆ ನನಗೆ ಮಹಾ ಸಿಟ್ಟು ಬರುತ್ತದೆ. ಕೆಟ್ಟ ಅನುಭವಗಳಾಗಿವೆ ಕೂಡ. ನಾನು ಬಲಕ್ಕೆ ತಿರುಗಲು ಇಂಡಿಕೇಟರ್ ಹಾಕಿ ಇನ್ನೇನು ತಿರುಗಬೇಕು ಎನ್ನುವಷ್ಟರಲ್ಲಿ ನನ್ನ ಬಲಪಕ್ಕದಿಂದ ವೇಗವಾಗಿ ನೇರವಾಗಿ ಹ...

ಯತಿ ಸ್ವಂತೀ -29

29-01-2018 ನನ್ನ ಪ್ರೈಮರಿ ಶಾಲೆ ರೈಲ್ವೇ ಕಾಲೋನಿಯಲ್ಲಿ ಮನೆಗೆ ಬಹಳ ಹತ್ತಿರದಲ್ಲಿತ್ತು. ನಾಲ್ಕನೆ ಇಯತ್ತೆಯಲ್ಲಿ ಉತ್ತೀರ್ಣನಾದ ಮೇಲೆ ನನ್ನ ಮುಂದಿನ ಶಾಲೆ ಸರ್ಕಾರಿ ಮಾಧ್ಯಮಿಕ ಹುಡುಗರ ಶಾಲೆ. ಇಲ್ಲಿ ನಾನು ಓದಿದ್ದು ಐದು, ಆರು ಮತ್ತು ಏಳನೆ ತರಗತಿಗಳು. ಇದು ಕೆ.ಆರ್.ರಸ್ತೆಯ ಮೇಲಿದ್ದ ವೆಂಕಟರಮಣ ದೇವಸ್ಥಾನದ ಎದುರಿಗೆ ರಸ್ತೆಯಿಂದ ಒಂದು ಫರ್ಲಾಂಗ್ ದೂರದಲ್ಲಿತ್ತು. ದಿನವೂ ರೈಲ್ವೇ ಕಾಲೋನಿಯ ಮನೆಯಿಂದ ಚೆಲುವಾಂಬ ಪಾರ್ಕ್ ಮತ್ತು ರಾಮಕೃಷ್ಣ ಆಶ್ರಮ ದಾಟಿ, ರೈಲ್ವೇ ಆಸ್ಪತ್ರೆ, ಭಾರತೀ ಸ್ತ್ರೀ ಸಮಾಜ ದಾಟಿ ಬಲಗಡೆ ತಿರುಗಿ ಸ್ವಲ್ಪ ದೂರ ನಡೆದರೆ... ಅದೋ.... ನಮ್ಮ ಮಾಧ್ಯಮಿಕ ಶಾಲೆ. ಐದರಿಂದ ಏಳರವರೆಗೆ ಓದಿದ ಶಾಲೆ. ಅನೇಕ ಹೊಸ ಗೆಳೆಯರು. ರಘುನಾಥ್, ಶ್ರೀಧರ್, ವಾಯ್‍ಚಲ್ ಹೆಸರುಗಳು ನೆನಪಿವೆ. ಏಕೆಂದರೆ ರಘುನಾಥ್ (ಗುಂಡ) ಬಹಳ ತುಂಟ. ನನ್ನನ್ನು ಗೋಳು ಹುಯ್ದುಕೊಳ್ಳುತ್ತಿದ್ದ. ಶ್ರೀಧರ ನಾವು ಗೆಳೆಯರ ಜೊತೆಗೆ ಕ್ರಿಕೆಟ್ ಆಡುವಾಗ (ಬಹುಶಃ ಹತ್ತನೇ ತರಗತಿ) ಕುಸಿದವನು ಮತ್ತೆ ಮೇಲೇಳಲಿಲ್ಲ. ವಾಯ್‍ಚಲ್ ಹೆಸರೇ ವಿಶಿಷ್ಟ. ಇನ್ನೂ ಇವನನ್ನು ಹುಡುಕುತ್ತಲೇ ಇದ್ದೇನೆ. ಎಲ್ಲಿರುವನೋ.. ಗುಂಡನ ತಾಯಿಯೂ, ನನ್ನ ತಾಯಿಯೂ ಒಂಟಿಕೊಪ್ಪಲ್ ಮೂರನೆ ಮೆಯ್ನ್‍ನಲ್ಲಿ ಎದುರೆದುರು ಮನೆಯಲ್ಲಿದ್ದರು. ಮಿಡ್ಲ್‍ಸ್ಕೂಲಿನಲ್ಲಿ ಇಬ್ಬರೂ ಸಹಪಾಠಿಗಳಂತೆ. ಗುಂಡ ಆಮೇಲೆ ನನ್ನ ಜೊತೆ ಹೈಸ್ಕೂಲಿಗೂ ಬಂದ. ಮಹಾಜನ ಹೈಸ್ಕೂಲ್. ನಂತರ ನ್ಯಾಷನಲ್ ಇನ್ಸ್‍ಟಿಟ್ಯ...

ಯತಿ ಸ್ವಂತೀ -28

28-01-2018 ದೂರದರ್ಶನಕ್ಕೂ, ನನಗೂ ಒಂದಿಷ್ಟು ನಂಟಿದೆ. ದೂರದರ್ಶನದ ಆರಂಭಕಾಲದಲ್ಲಿ ಕನ್ನಡ ಕಾದಂಬರಿಗಳನ್ನು 13 ಅಥವಾ 26 ಕಂತುಗಳ ಧಾರಾವಾಹಿಗೆ ಅಳವಡಿಸಲು ಆಹ್ವಾನ ಬಂದಿತ್ತು. ನಾನೂ ಒಬ್ಬ ಕೆಲವು ಕಾದಂಬರಿಗಳನ್ನು ಚಿತ್ರನಾಟಕ ಮಾಡಿದವರಲ್ಲಿ. ಇಡೀ ಕಾದಂಬರಿಯನ್ನು 13 ಭಾಗ ಮಾಡಿ ಸಿನಾಪ್ನಿಸ್ ಬರೆದು, ಮೊದಲ ಅಧ್ಯಾಯಕ್ಕೆ ಇಡೀ ಚಿತ್ರನಾಟಕ ಮತ್ತು ಸಂಭಾಷಣೆ ಬರೆಯುವ ಕೆಲಸ. ಬಹಳ ಇಷ್ಟವಾಗಿ ಮಾಡಿದ್ದೆ ಆ ಕೆಲಸವನ್ನು. ನನಗೆ ಅಶ್ವಿನಿ ಅವರ ಬಿಂದಿಯಾ ಬಹಳ ಇಷ್ಟದ ಕಾದಂಬರಿಗಳಲ್ಲಿ ಒಂದು. ಅದರಲ್ಲಿ ಬಿಂದಿಯಾ ಕಾದಂಬರಿಯ ಕೊನೆಯ ಭಾಗದ ಹೊತ್ತಿಗೆ ಒವೇರಿಯನ್ ಕ್ಯಾನ್ಸರ್ ಬಂದು ಸಾಯುತ್ತಾಳೆ. ನನಗೆ ಅದನ್ನೋದುವಾಗ ಬಹಳ ದುಃಖ. ಅಶ್ವಿನಿ ಅವರೊಂದಿಗೆ (ಅವರು ನನ್ನ ಸೋದರತ್ತೆಯ ನಾದಿನಿ. ಈಗ ಸೋದರತ್ತೆಯೂ ಇಲ್ಲ, ಅಶ್ವಿನಿಯವರೂ ಇಲ್ಲ) ಸಾಕಷ್ಟು ಚರ್ಚೆ ನಡೆಸಿದ್ದೆ. ನೀವು ಅವಳನ್ನು ಸಾಯಿಸಕೂಡದಿತ್ತು ಅಂತ. ಆದರೆ ಅವರು ನಕ್ಕು, ವಾಸಿಯಾಗದ ಖಾಯಿಲೆ (ಆ ಸಮಯದಲ್ಲಿ ಕ್ಯಾನ್ಸರ್ ಎಂದರೆ ಗೋವಿಂದಾ ಗೋವಿಂದ ಎನ್ನುವಂತಹ ಸನ್ನಿವೇಶವಿತ್ತು) ಬಂದರೆ ಅವಳು ಹೇಗೆ ಬದುಕಲು ಸಾಧ್ಯ? ಎಂದು ನಕ್ಕಿದ್ದರು. ನಾನು ಬಿಂದಿಯಾ ಕಾದಂಬರಿಯನ್ನು ದೂರದರ್ಶನದ ಚಿತ್ರನಾಟಕಕ್ಕೆ ಆರಿಸಿಕೊಂಡಾಗ ಬಿಂದಿಯಾಳಿಗೆ ಚಿಕಿತ್ಸೆ ಕೊಡಿಸಲು ಅವಳ ಪತಿ ಸತ್ಯನ್ ಅಮೆರಿಕಾಗೆ ಕರೆದೊಯ್ಯುತ್ತಾನೆ. ಅಲ್ಲಿ ಒಂದಿಷ್ಟು ಅಡ್ವಾನ್ಸ್ ಕ್ಯೂರ್ ಇದೆ ಎನ್ನುವಂತೆ ಮುಗಿಸಿದ್ದೆ. ಅದನ್ನು ಅಶ್ವ...

ಯತಿ ಸ್ವಂತೀ -27

27-01-2018 ಬಾಲ್ಯದ ಆಟ, ಆ ಹುಡುಗಾಟಗಳು ಎಂದಿಗೂ ಮಾಸವು. ಮನೆಯ ಮುಂದಿದ್ದ ಪುಟ್ಟ ಫೀಲ್ಡ್‍ನಲ್ಲಿ ಕ್ರಿಕೆಟ್ ಆಡುತ್ತಿದ್ದೆವು. ನಮ್ಮ ತಾಯಿ ಒಂದು ರೀತಿ ಅಂಪೈರ್ ಆಗಿಬಿಡುತ್ತಿದ್ದರು! ನನಗೆ ನೆನಪಿದೆ. ಟೇಬಲ್ ಟೆನಿಸ್ ಆಡಲು ಮರದ ಹಲಗೆಗಳಲ್ಲಿ ಬ್ಯಾಟ್ ಮಾಡಿಕೊಂಡಿದ್ದೆವು. ಅದಕ್ಕೆ ಬಣ್ಣ ಹೊಡೆಯೋಣ ಎಂದು ಮಾತಾಡಿಕೊಂಡಿದ್ದೆವು. ಅದು ಯಾವ ಮಾಯದಲ್ಲೋ ನಮ್ಮ ತಾಯಿಯ ಕಿವಿ ತಲುಪಿದೆ. ಸಂಜೆ ಶಾಲೆಯಿಂದ ಬಂದು ಕ್ರಿಕೆಟ್ ಆಡಲು ಬ್ಯಾಟ್ ಕೈಗೆತ್ತಿಕೊಂಡರೆ ಬಣ್ಣ ಕೈಗೆ ಮೆತ್ತಿಕೊಂಡಿತು... ನೋಡಿ ಒಂದು ಕ್ಷಣ ನಗು ಬಂದರೂ ನಂತರ ಕೋಪ ಬಂದಿತ್ತು. ಅಮ್ಮ ನಮ್ಮ ಕ್ರಿಕೆಟ್‍ಬ್ಯಾಟಿಗೆ ಹಸಿರು ಪೆಯಿಂಟ್ ಮಾಡಿಬಿಟ್ಟಿದ್ದರು. ಅಬ್ಬಾ... ಅವರ ಈ ಅಂಪೈರಿಂಗ್ ಕೆಲಸ 1965ರ ಸುಮಾರಿಗೆ ಆರಂಭವಾಗಿದ್ದು, 1998ರಲ್ಲಿ ನಾವು ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ವಾಸ್ತವ್ಯ ಹೂಡಿದ ಮೇಲೂ ಮುಂದುವರಿದಿತ್ತು. ನನ್ನ ಮಕ್ಕಳು, ನಮ್ಮ ಸುತ್ತ ಮುತ್ತಲ ಮನೆಯ ಮಕ್ಕಳು ಆಡುವಾಗ ನಮ್ಮ ಮನೆಯ ಮುಂದೆ ಕುರ್ಚಿ ಹಾಕಿಕೊಂಡು ಕೂತು ಅಂಪೈರಿಂಗ್ ನಡೆಸುತ್ತಿದ್ದರು! ಅವರಂತಹ ಜೀವನ್ಮುಖಿಯನ್ನು ನಾನು ಕಂಡಿರುವುದು ಬಹಳ ಕಡಿಮೆ. ಅವರ ಬಹು ಫೇವರಿಟ್ ಕಾದಂಬರಿಗಳು ಪತ್ತೇದಾರಿ. ಸಿನಿಮಾಗಳು ಕೂಡ ಅಂತಹ ಡಿಟೆಕ್ಟಿವ್ ವಿಷಯಗಳಿರುವುದೇ. ಟಿವಿ ಬಂದ ಮೇಲಂತೂ ಕರಮ್‍ಚಂದ್, ಕಿಲೇ ಕಾ ರಹಸ್ಯ, ತೆಹಕಿಕಾತ್ ಮುಂತಾದ ಧಾರಾವಾಹಿಗಳನ್ನು ನೋಡುವುದರಲ್ಲಿ ಆಸಕ್ತಿ ತೋರುತ್ತಿದ್ದರು. ನ...

ಯತಿ ಸ್ವಂತೀ -26

26-01-2018 ನಮ್ಮ ಮೈಸೂರು ರೈಲ್ವೇ ಕ್ವಾರ್ಟರ್ಸ್ ಮನೆಯ ಎದುರಿಗೆ ದೊಡ್ಡ ಮೈದಾನವೊಂದಿತ್ತು. ಅಲ್ಲಿ ಅನೇಕ ಸಲ ಪೆರೇಡ್‍ಗಳು ನಡೆಯುತ್ತಿದ್ದವು. ವಿಶೇಷವಾಗಿ ಗಣರಾಜ್ಯ ದಿನ ಮತ್ತು ಸ್ವಾತಂತ್ರ್ಯ ದಿನ. ನಮಗೆಲ್ಲಾ ಪೆಪ್ಪರ್‍ಮೆಂಟ್ ಸಿಗುತ್ತೆ ಅಂತ ಹೋಗಿದ್ದ ನೆನಪು. ಆಗೆಲ್ಲಾ ಚಾಕಲೇಟ್ ಇರಲಿಲ್ಲ. ಬಣ್ಣಬಣ್ಣದ ಪಾರದರ್ಶಕ ಸಿಹಿಗೋಲಿಗಳಿದ್ದವು. ಅದನ್ನು ಪೆಪ್ಪರ್‍ಮೆಂಟ್ ಎನ್ನುತ್ತಿದ್ದೆವು. ಮೈದಾನದ ಒಂದು ಮೂಲೆಯಲ್ಲೊಂದು ಕಲ್ಲಿನ ಚಿಕ್ಕ ಕಟ್ಟಡ. ಅದರಲ್ಲಿ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್. ನಾವು ಚಿಕ್ಕ ಹುಡುಗರಾಗಿದ್ದಾಗ ಕಬ್‍ಗಳು. ಹೆಣ್ಮಕ್ಕಳು ಬುಲ್‍ಬುಲ್‍ಗಳು. ರತ್ತಿನಂ ಎನ್ನುವ ಸ್ಕೌಟ್ ಮಾಸ್ಟರ್ ನಮಗೆ ಇದ್ದರು. ಅವರೊಂದಿಗೆ ಯಾವುದೋ ಒಂದು ತಮಿಳುನಾಡಿನ ಊರಿಗೆ ಸ್ಕೌಟ್ ಕ್ಯಾಂಪ್‍ಗೆ ಹೋದದ್ದು ಅಸ್ಪಷ್ಟವಾದ ಜ್ಞಾಪಕ. ಸ್ಕೌಟ್ ಬಿಲ್ಡಿಂಗ್‍ನ ಹಿಂಭಾಗದಲ್ಲಿ ನಮ್ಮ ಡಿಸ್ಪೆನ್ಸರಿ ಇತ್ತು. ಡಿಸ್ಪೆನ್ಸರಿ ಅಂದರೆ ಪುಟ್ಟ ಆಸ್ಪತ್ರೆ ಕಣ್ರೀ. ಅಲ್ಲಿ ಒಬ್ಬರು ಡಾಕ್ಟರು, ಒಬ್ಬರು ಕಾಂಪೌಂಡರು. ನಮಗೆ ಜ್ವರ ಬಂದರೆ ಅಲ್ಲಿಗೆ ಹೋಗುತ್ತಿದ್ದೆವು. ಕಾರ್ಮನೇಟಿವ್ (ಕಾರ್ಬನೇಟಿವ್?) ಮಿಕ್ಸ್‍ಚರ್ ಅಂತ ಒಂದು ಭಯಾನಕ ಕಹಿ ಔಷಧಿ ಕೊಡುತ್ತಿದ್ದರು. ಆ ಬಣ್ಣದ ನೀರನ್ನು ವ್ಯಾ ಎಂದು ಮುಖ ಮಾಡಿಕೊಂಡು ಕುಡಿಯುತ್ತಿದ್ದೆವು. ಬೇಸಗೆ ಕಾಲ ಬಂದಾಗಲಂತೂ ನಮಗೆಲ್ಲ ರಜೆಯ ಖುಷಿ. ಜೊತೆಗೆ ಈ ಇನಾಕ್ಯುಲೇಷನ್, ವ್ಯಾಕ್ಸಿನೇಷನ್‍ಗಳ ಕಾಟದ ಭಯ. ಕಾಲರಾ, ಸಿಡು...

ಯತಿ ಸ್ವಂತೀ -25

25-01-2018 ‘ಡ್ಯಾಡೀ!’ ಎಂದು ಸ್ಲೋ ಮೋಷನ್‍ನಲ್ಲಿ ಹಾರ ಹಿಡಿದುಕೊಂಡು ಏರ್‍ಪೋರ್ಟ್‍ನಲ್ಲಿ ಓಡುವ ಪುಟ್ಟ ಹುಡುಗನ ನೆನಪಿದೆಯಾ? ನಾಯಿಗಳಿಗೆ ‘ರಮಣಮೂರ್ತಿ’ ಎಂದು ಹೆಸರಿಟ್ಟು ಜಗಳಗಂಟಿ ಆದಿಲಕ್ಷ್ಮಿಗೆ ಸರಿಸಮನಾಗಿ ಜಗಳವಾಡುವ ಗಣೇಶನ ಜ್ಞಾಪಕ ಇದೆಯಾ? ‘ನಿಮ್ಮೆಂಜಲು ತಾನೇ ಗಣೇಶ’ ಅಂತ ಅಂಜಲಿ ಅಂದಾಗ, ‘ನೀರು ಹಿಡಕೊಂಡು ಬನ್ನಿ, ಉಗೀತೀನಿ’ ಎನ್ನುವ ಗಣೇಶ, ‘ಅಯ್ಯಯ್ಯೋ ಹಾಗಂತ ನಮ್ಮಗೂನ ಹೊಡೆದ್ಬಿಡಬೇಡಪ್ಪಾ’ ಎಂದು ಅಜ್ಜಿ ವೈಶಾಲಿ ಲಂಬೋದರನಿಗೆ ಹೇಳುವ ಮಾತು... ನಿಮ್ಮ ಊಹೆ ಕರೆಕ್ಟ್. ಗಣೇಶನ ಮದುವೆ ಮತ್ತು ಗೌರಿ ಗಣೇಶ. ಈ ಎರಡು ಸಿನಿಮಾಗಳನ್ನು ಎಷ್ಟು ಸಲ ನೋಡಿದರೂ ಬೋರ್ ಆಗುವುದಿಲ್ಲ. ಎರಡೂ ಮಲ್ಲಾದಿ ವೆಂಕಟಕೃಷ್ಣಮೂರ್ತಿ ಅವರ ಕಾದಂಬರಿಗಳು. ಫಣಿ ರಾಮಚಂದ್ರ ಅವರ ಜಾಣ ನಿರ್ದೇಶನ. ನನಗೆ ಇವೆರಡಕ್ಕಿಂತ ಬಹಳ ಇಷ್ಟವಾಗಿದ್ದು ‘ಒಂದು ಸಿನಿಮಾ ಕಥೆ’. ಅನಂತನಾಗ್, ಅಂಜನಾ ಮುಂತಾದವರು ನಟಿಸಿದ ಚಿತ್ರ. ಅದೆಂತಹ ಕ್ಲೆವರ್ ಸ್ಕ್ರೀನ್‍ಪ್ಲೇ! ಸಿನಿಮಾ ಅಂದುಕೊಂಡಷ್ಟು ಗೆಲ್ಲಲಿಲ್ಲವೆಂದೆನಿಸುತ್ತದೆ. ಆದರೆ ಚಿತ್ರನಾಟಕ ಮಾತ್ರ ಬಹಳ ಶಕ್ತಿಯುತವಾದದ್ದು. ಗಣೇಶನ ಮದುವೆಯ ಆದಿಲಕ್ಷ್ಮಿಯೇ ಶ್ರುತಿ ಎನ್ನುವ ರಹಸ್ಯ ನಮಗೆ ಗೊತ್ತಿದ್ದರೂ ನಾಯಕನಿಗೆ ಗೊತ್ತಾಗುವವರೆಗೂ ಸಸ್ಪೆನ್ಸ್. ಅದರಲ್ಲಿ ವೈಶಾಲಿ ಕಾಸರವಳ್ಳಿಯ ಕ್ರಿಕೆಟ್‍ಗೂ, ಜೀವನಕ್ಕೂ ಹೋಲಿಸುವ ವಾಕ್ಯಗಳು ನಗೆಬುಗ್ಗೆ ಉಕ್ಕಿಸುತ್ತವೆ. ಅಯ್ಯೋ ಜೈಲಿಗೆ ಹೋಗೋ ಮುಂಚೆ ಕಪಿಲ್‍ದೇವ್ ತರ ಇದ್ದೋನ...

ಯತಿ ಸ್ವಂತೀ -24

24-1-2018 ಸಿನಿಮಾದ ಬಹು ಮುಖ್ಯ ಬಲ ಯಾವುದೆನ್ನುತ್ತೀರಿ? ನನ್ನ ಪ್ರಕಾರ ಕಥೆ. ಅತ್ಯಂತ ಜನಪ್ರಿಯ ನಟರು ಕೆಟ್ಟ ಕಥೆಯ ಸಿನಿಮಾವನ್ನು ಒಮ್ಮೆ ಅವರ ಭುಜಗಳ ಮೇಲೆ ಹೊತ್ತು ಯಶಸ್ಸಿನತ್ತ ದಾಪುಗಾಲು ಹಾಕಬಹುದು. ಆದರೆ ಅದು ಪ್ರತಿ ಸಲ ನಡೆಯುವುದಿಲ್ಲ. ಮರ್ದ್, ಅಕೇಲಾ, ಮೃತ್ಯುದಾತ ಇವೆಲ್ಲವೂ ಕಳೆದ ಶತಮಾನದ ಅತ್ಯಂತ ಜನಪ್ರಿಯ ನಟನ ವಿಫಲಗೊಂಡ ಚಿತ್ರಗಳು. ಕಥೆ ಚೆನ್ನಾಗಿರಬೇಕು. ಅದಕ್ಕೂ ಹೆಚ್ಚಿಗೆ ಚಿತ್ರನಾಟಕ ಇನ್ನೂ ಚೆನ್ನಾಗಿರಬೇಕು. ಪುಟ್ಟಣ್ಣ ಕಣಗಾಲ್ ಅವರ ‘ಗೆಜ್ಜೆಪೂಜೆ’ ಚಿತ್ರನಾಟಕಕ್ಕೆ ಪ್ರಶಸ್ತಿ ಗಳಿಸಿದರೆಂದು ನೆನಪು. ನನಗೆ ಕೆಲವು ಸಿನಿಮಾಗಳು ಬಹಳ ಇಷ್ಟ, ಅವುಗಳ ಚಿತ್ರನಾಟಕದ ಕಾರಣದಿಂದಾಗಿ. ಇವುಗಳಲ್ಲಿ ಮೊದಲನೆಯದು ಕಟಿ ಪತಂಗ್. ರಾಜೇಶ್‍ಖನ್ನ, ಆಶಾಪಾರೇಖ್ ಚಿತ್ರ. ಶಕ್ತಿಸಾಮಂತ ಅವರ ಸಿನಿಮಾ. ರಾಜೇಶ ಆಶಾಪಾರೇಖಳನ್ನು ನೋಡದೆಯೇ ಮದುವೆಯಾಗಲು ಬರುತ್ತಾನೆ. ಅವಳು ಅಂದೇ ರಾತ್ರಿ ತನ್ನ ಪ್ರೇಮಿ ಪ್ರೇಮ್‍ಛೋಪ್ರಾನನ್ನು ನೋಡಲು ಮದುವೆ ಮನೆಯಿಂದ ಓಡಿಬಿಡುತ್ತಾಳೆ. ಪ್ರೇಮ್ ಕೆಟ್ಟವನೆಂದು ಅರಿವಾಗಿ, ತನ್ನ ಚಿಕ್ಕಪ್ಪ ತನ್ನನ್ನು ಹುಡುಕುತ್ತಿರುವುದರ ಅರಿವಾಗಿ ರೈಲು ಹತ್ತುತ್ತಾಳೆ. ಅಲ್ಲಿ ಅವಳ ಗೆಳತಿ ಪೂನಂ ಸಿಗುತ್ತಾಳೆ. ಅವಳು ನೈನಿತಾಲ್‍ನ ಶ್ರೀಮಂತನ ಮಗನ ವಿಧವೆ. ಶ್ರೀಮಂತನ ಮಗ ತಂದೆಯಿಂದ ಬೇರೆಯಾಗಿ ಪೂನಂಳನ್ನು ಮದುವೆಯಾಗಿರುತ್ತಾನೆ. ಆದರೆ ಅವನು ಸತ್ತು ಹೋದಾಗ ಮಗುವಿನೊಂದಿಗೆ ಸೊಸೆಯನ್ನು ಮನೆಗೆ ಆಹ್ವಾನಿಸುತ್ತಾನೆ ಶ್...

ಯತಿ ಸ್ವಂತೀ -23

23-01-2018 ಈ ಅಮರ್‍ಪ್ರೇಮ್ ಸಿನಿಮಾ ಯಾಕೋ ನನ್ನನ್ನು ಕಾಡ್ತಾ ಇದೆ. ಮತ್ತೊಮ್ಮೆ ಮಗದೊಮ್ಮೆ ನೋಡಬೇಕೆನ್ನಿಸುತ್ತಿದೆ. ಅದು ಮೊದಲ ಸಲ ಬಂದಾಗ ನನಗೆ ಹದಿನಾಲ್ಕು ವರ್ಷ. ಕಿಶೋರಾವಸ್ಥೆಯಲ್ಲಿ ನನ್ನ ಮೇಲೆ ಈ ಸಿನಿಮಾ ಮಹಾನ್ ಪ್ರಭಾವ ಬೀರಿತು. ಮತ್ತೆ ಅದೆಷ್ಟು ಸಲ ನೋಡಿರುವೆನೋ ನೆನಪಿಲ್ಲ. ನಾವು ರಾಜರಾಜೇಶ್ವರಿನಗರಕ್ಕೆ ಬಂದು ನೆಲೆಸಿದಾಗ ನನ್ನ ಮಕ್ಕಳು ಬಹಳ ಚಿಕ್ಕವರು. ಅಮರ್‍ಪ್ರೇಮ್ ಬಂದಿತ್ತು ಟಿ.ವಿ.ಯಲ್ಲಿ. ಕಣ್ಣೀರು ಸುರಿಸುತ್ತಾ ಒಂದಿಷ್ಟೂ ‘ಆನಂದಿ’ಸಲಾಗಲಿಲ್ಲ. ಮತ್ತೊಮ್ಮೆ ನಾನು, ನನ್ನ ಪತ್ನಿ ಇಬ್ಬರೇ ಮನೆಯಲ್ಲಿದ್ದಾಗ ಈ ಸಿನಿಮಾ ಮತ್ತೆ ಪ್ರಸಾರವಾಗಿತ್ತು. ಇಬ್ಬರೂ ಮೌನವಾಗಿ ನೋಡಿ ದುಃಖಿಸಿದ್ದೆವು. ಕೊನೆಯನ್ನು ನೋಡುವಾಗಲಂತೂ ನನ್ನ ಗಂಟಲು ಉಬ್ಬಿ ಬರುತ್ತದೆ, ಪ್ರತಿ ಸಲ, ವಿಥೌಟ್ ಫೆಯ್ಲ್. ಹಳ್ಳಿಯ ಯುವತಿ. ದುಷ್ಟ ಪತಿ. ಮನೆಯಿಂದ ಓಡಿಸಿದಾಗ ಊರಿನ ಒಬ್ಬ ‘ದೊಡ್ಡ’ ಮನುಷ್ಯ ಅವಳನ್ನು ಕಲ್ಕತ್ತಾದ ವೇಶ್ಯಾವಾಟಿಕೆಗೆ ಸೇರಿಸಿಬಿಡುತ್ತಾನೆ. ಅಲ್ಲಿ ಅವಳು ಸಂಗೀತ ಕಲಿಯುತ್ತಾಳೆ. ಒಂದು ದಿನ ಅವಳ ಹಾಡು ಕೇಳಿ ಒಬ್ಬ ಶ್ರೀಮಂತ ಮಹಡಿ ಹತ್ತಿ ಬಂದಾಗ ಅವಳು ಹಾಡು ನಿಲ್ಲಿಸಿದಾಗ, ‘ಸುಮ್ಮನಾದೆಯೇಕೆ? ಹಾಡು’ ಎನ್ನುತ್ತಾನೆ. ‘ವಿರಹದಿಂದ ಪೆಟ್ಟು ತಿಂದ ಪ್ರೇಮದ ಹುಚ್ಚಿ, ತನು ಮನ ಬಾಯಾರಿದೆ, ಕಣ್ಣುಗಳಲ್ಲಿ ನೀರು’ ಎಂದು ಅವಳು ಹಾಡುವಾಗ ನನಗೆ ಇಂದು ಕೂಡ ಕಣ್ಣೀರು ತುಂಬಿಕೊಳ್ಳುತ್ತದೆ. ನಂತರ ರಾಜೇಶ್ ಖನ್ನನ ‘ರೋ ಮತ್ ಪುಷ್ಪಾ. ಐ ಹೇಟ್...

ಯತಿ ಸ್ವಂತೀ -22

22-1-2018 ತೋಟದಿ ಹೂಗಳು ಅರಳುವ ಮುನ್ನ, ನನ್ನ ನಿನ್ನ ಕಂಗಳ ಮಿಲನದ ಮುನ್ನ ಎಲ್ಲಿ ಇಂಥ ಮಾತು, ಇಂಥ ಭೇಟಿ, ಇಂಥ ರಾತ್ರಿಗಳು... ಅಬ್ಬಾ... ಈ ಚಿತ್ರ ಗೀತೆಯನ್ನು ನಾನು ಕೇಳುತ್ತಿರುವುದು ಎಷ್ಟು ಸಾವಿರದ ಸಲವೋ..! ಆದರೂ ನನ್ನ ಮನಸ್ಸಿನ್ನೂ ತಣಿದಿಲ್ಲ. ಕೇಳುತ್ತಲೇ ಇರಬೇಕೆನ್ನಿಸುವಂತಹ ಹಾಡು. ಗೊತ್ತಾಗಲಿಲ್ವಾ? ನಾನು ಕನ್ನಡದಲ್ಲಿ ಭಾವಾನುವಾದ ಮಾಡಿದ ಹಿಂದೀ ಹಾಡಿದು. 1969ರ ಸಿನಿಮಾ. ‘ಬಾಗೋಮೆ ಫೂಲೋಂಕೆ ಖಿಲ್‍ನೆಸೆ ಪೆಹಲೆ, ತೆರೆ ಮೆರೆ ನೈನೋಂಕೆ ಮಿಲ್‍ನೆಸೆ ಪೆಹಲೆ, ಕಹಾಂಕಿ ಎ ಬಾತೇ ಮುಲಾಕಾತೇ ಐಸೀ ರಾತೇ...’ ಓದಿದಾಗ ಹಾಡಾವುದೆಂಬುದರ ಸುಳಿವು ಸಿಕ್ಕಿತಾ? ಉಹೂಂ? ಹೌದು... ಖಾಲಿ ಕಾಗದ ಈ ಮನ ನನ್ನ, ಬರೆದೆ ನೀನು ಹೆಸರ ಅದರಲಿ ನಿನ್ನ... ಕೋರಾ ಕಾಗಝ್ ಥಾ ಎ ಮನ್ ಮೇರಾ ಲಿಖ್ ಲಿಯಾ ನಾಂ ಇಸ್ ಪೇ ತೇರಾ... ಆರಾಧನಾ ಚಿತ್ರದ ಎಸ್‍ಡಿ ಬರ್ಮನ್ ಸಂಗೀತದ ಲತಾ ಕಿಶೋರ್ ಸ್ವರದ ಸುಂದರ ಕಾಶ್ಮೀರದ ಚಿತ್ರಣವಿರುವ ಸ್ಟೈಲಿಶ್ ರಾಜೇಶ್ ಖನ್ನಾ, ಬಂಗಾಳದ ಸುಂದರಿ ಶರ್ಮಿಲಾ ಟಾಗೋರ್ ಅಭಿನಯದ ಹಾಡು. ಈ ಹಾಡು ಪಹಾಡಿ ರಾಗದ ಮೇಲೆ ಆಧಾರಗೊಂಡಿದೆ ಎಂದು ಓದಿದೆ. ಇದೊಂದು ವಿಶಿಷ್ಟ ರಾಗ. ಜ್ಯೂಯೆಲ್ ಥೀಫ್ ಚಿತ್ರದಲ್ಲಿ ಕೂಡ ಒಂದು ಪಹಾಡಿ ರಾಗದ ಹಾಡಿದೆ. ಇದರಲ್ಲಿಯೂ ಎಸ್‍ಡಿ ಬರ್ಮನ್ ಮತ್ತು ಲತಾ ಇದ್ದಾರೆ. ಆದರೆ ಗಂಡು ಧ್ವನಿ ಮಹಮ್ಮದ್ ರಫಿಯದು. ದಿಲ್ ಪುಕಾರೆ ಆರೆ ಆರೆ ಆರೆ ಅಭಿ ನ ಜಾ ಮೆರೆ ಸಾಥಿ ಎಂದು ಆರಂಭವಾಗುವ ಹಾಡು ... ಇದು ಕೂಡ ಮ...

ಯತಿ ಸ್ವಂತೀ -21

21-1-2018 ಬರೆಯಲು ನೂರಾರು ವಿಷಯಗಳಿದ್ದರೂ ಏನು ಬರೆಯಲಿ ಎಂದು ಪರಪರ ತಲೆ ಕೆರೆದುಕೊಳ್ಳುವುದು ಇದ್ದೇ ಇದೆ. ನನ್ನ ಮೊದಲ ನಾಲ್ಕು ವರ್ಷಗಳ ವಿದ್ಯಾಭ್ಯಾಸ ಮನೆಯಿಂದ ಎರಡು ಫರ್ಲಾಂಗ್ ದೂರದ ಸರ್ಕಾರಿ ಶಾಲೆಯಲ್ಲಾಯಿತು. ಅಲ್ಲಿ ಹುಡುಗರು ಮತ್ತು ಹುಡುಗಿಯರು ಇಬ್ಬರಿಗೂ ಶಿಕ್ಷಣ ಪಡೆಯಲು ಅವಕಾಶವಿತ್ತು. ನಮ್ಮ ಮನೆಯ ಜೋಡಿ ಮನೆ ಬಷೀರುಲ್ಲಾಖಾನ್ ಅವರದು. ಅವರ ಮನೆಯ ಪಕ್ಕ ಒಂದು ಸೈಟ್ ಖಾಲಿ ಇತ್ತು. ಅದರಾಚೆಗೆ ಮತ್ತೊಂದು ಜೋಡಿ ಮನೆ. ಬೂಬಮ್ಮ ಅಂದರೆ ಬಷೀರುಲ್ಲಾ ಖಾನ್ ಹೆಂಡತಿ. ಅವರ ಹೆಸರು ಮಾಜೋಬೀ ಇರಬಹುದು ಎಂಬ ಅಸ್ಪಷ್ಟ ನೆನಪು. ನಾವು ಬೂಬಮ್ಮ ಎಂದೇ ಕರೆಯುತ್ತಿದ್ದೆವು. ಹಿಂದೆ ಒಂದು ಕನ್ಸರ್ವೆನ್ಸಿ. ಅದನ್ನು ದಾಟಿದರೆ ಮತ್ತೊಂದು ಸಾಲು ಮನೆ. ಅದರಾಚೆ ಒಂದು ರಸ್ತೆ. ದೊಡ್ಡ ಮನೆಗಳ ಸಾಲು. ಅದೋ, ಅಲ್ಲಿ ಆ ಕೊನೆ ಮನೆಯ ಪಕ್ಕದಲ್ಲಿ ನಮ್ಮ ಶಾಲೆಯ ಕಾಂಪೌಂಡು. ನಮ್ಮ ಶಾಲೆಯ ಮುಂಭಾಗದಲ್ಲಿ ಒಂದಿಷ್ಟು ಖಾಲಿ ಜಾಗ. ಅದರಾಚೆಗೆ ರೈಲ್ವೇ ಕಂಬಿಗಳು. ನಮ್ಮ ಶಾಲೆಯ ಮುಂದೆಯೇ ಬೆಂಗಳೂರು ಮತ್ತು ಅರಸೀಕೆರೆಗಳಿಗೆ ರೈಲುಗಳು ಓಡಾಡುತ್ತಿದ್ದವು. ಮೊದಲು ಸ್ಟೀಮ್ ಎಂಜಿನ್ ಇತ್ತು. ವೈಎಲ್, ವೈಡಿ ನೆನಪಿರುವ ಹೆಸರುಗಳು. ಜುಷ್ ಝುಕ್ ಜುಷ್ ಝುಕ್ ಎನ್ನುವ ಸಪ್ಪಳ ನಮಗೆ ಶಾಲೆಯಲ್ಲಿ ಕೂಡ ಕೇಳಿಸುತ್ತಿತ್ತು. ಹೆಂಚು ಹೊದೆಸಿದ ಉದ್ದದ ಕಟ್ಟಡ. ನೆಲಕ್ಕೆ ಕಡಪ ಕಲ್ಲು ಹಾಸಲ್ಪಟ್ಟಿತ್ತು. ಹೆಡ್‍ಮೇಡಂ ನೆನಪಿದ್ದಾರೆ. ಜೊತೆಗೆ ಕೆ.ಎಸ್. ನಾಗಲಕ್ಷ್ಮಮ್ಮ ಕೂಡ ಸ...

ಯತಿ ಸ್ವಂತೀ -20

20-1-2018 ಸ್ವಾಮಿ ವಿಶ್ವಪ್ರಿಯರು ಶ್ರೀ ವಿಷ್ಣು ಸಹಸ್ರನಾಮದ ಬಗ್ಗೆ ನೀಡಿರುವ ವ್ಯಾಖ್ಯಾನವು ಹತ್ತು ಸಿ.ಡಿ.ಗಳಲ್ಲಿದೆ. ಅಂದರೆ ಪ್ರತಿ ಸಿ.ಡಿ.ಯಲ್ಲಿ ನೂರು ನಾಮಗಳ ವಿಶ್ಲೇಷಣೆ. ಬಹಳ ಸುಂದರವಾದ ನಿರೂಪಣೆ. ಅವರ ಸಟ್ಲ್ ಹ್ಯೂಮರ್ ಅಲ್ಲಲ್ಲಿ ಕಚಗುಳಿ ಇಡುತ್ತದೆ. ಒಟ್ಟಿನಲ್ಲಿ ಸಹಸ್ರನಾಮದ ಬಗ್ಗೆ ಒಂದು ಸಮಗ್ರ ಚಿತ್ರಣ ಎನ್ನಬಹುದೇನೋ..! ಅವರು ಅದರಲ್ಲಿ ಹೇಳಿದ ಒಂದು ಸಂಗತಿ ನಾನಿನ್ನೂ ಮರೆತಿಲ್ಲ. ನಾನು ಅವನ್ನು ಕೇಳಿ ಬಹಳ ವರ್ಷಗಳಾಗಿವೆ. ಆದರೂ ಆ ಒಂದು ವಿಷಯ ಆಗಾಗ ನೆನಪಾಗುತ್ತದೆ. ಅವರು ಕೈಗಳ ಬಗ್ಗೆ ವಿಶೇಷವಾದ ವಿವರಣೆ ನೀಡುತ್ತಾರೆ. ‘ನನ್ನ ಕೈಲಿ ನೋಡಕ್ಕಾಗೋಲ್ಲ’, ‘ನನ್ನ ಕೈಲಿ ನಡೆಯೋಕ್ಕಾಗಲ್ಲ’ ಎನ್ನುವ ಮಾತುಗಳನ್ನು ಅವರಲ್ಲಿ ಉದಾಹರಣೆಯಾಗಿ ನೀಡುತ್ತಾರೆ. ಕೈಯಲ್ಲಿ ನೋಡುವುದೆಂದರೇನು? ಕೈಯಲ್ಲಿ ನಡೆಯುವುದೆಂದರೇನು? ಎನ್ನುವುದಕ್ಕೆ ಅದ್ಭುತ ವಿವರಣೆ ನೀಡಿದ್ದಾರೆ. ನಮ್ಮ ಕೈಗಳನ್ನು ನಮ್ಮ ಎರಡನೆಯ ಕಣ್ಣುಗಳೆನ್ನಬಹುದಲ್ಲವಾ? ಅತ್ಯಂತ ಕಡು ಕತ್ತಲೆಯಲ್ಲಿಯೂ ನಾವು ವಸ್ತುಗಳನ್ನು ಮುಟ್ಟಿ ‘ನೋಡಿ’ ಕಂಡುಹಿಡಿಯಬಲ್ಲೆವು! ಮುಟ್ಟಿ ನೋಡುವುದು ಅಲ್ಲವೇ? ಭೈರಪ್ಪನವರ ಕಾದಂಬರಿಗಳಲ್ಲಿ ‘ಅವರ ಕೈಲಿ ಹೇಳಿ ಕಳಿಸುತ್ತೀನಿ’ ಎನ್ನುವ ಮಾತನ್ನು ಓದಿದ ನೆನಪು. ಯಂಡಮೂರಿಯವರ ವ್ಯಕ್ತಿತ್ವ ವಿಕಾಸನದ ಪುಸ್ತಕದಲ್ಲಿ ಭಗವಂತ ತನ್ನ ಪತ್ನಿಯೊಂದಿಗೆ ಮಾತಾಡುವ ಒಂದು ಕಥೆ ಇದೆ. ‘ದೇವೀ, ಇದುವರೆಗೆ ನಾನು ಸೃಷ್ಟಿ ಮಾಡಿರದ ಒಂದು ಪ್ರಾಣಿಯನ್...

ಯತಿ ಸ್ವಂತೀ -19

19-1-2018 ನಾವು ಒಂದು ರೈಲು ನಿಲ್ದಾಣ ಎಂದುಕೊಂಡರೆ ನಮ್ಮ ಜೀವನದಲ್ಲಿ ಹಾದು ಹೋಗುವ ಪ್ರತಿಯೊಬ್ಬರನ್ನೂ ಒಂದು ರೈಲುಗಾಡಿ ಎಂದುಕೊಳ್ಳಬಹುದು. ಕೆಲವು ಗಾಡಿಗಳು ನಮ್ಮ ನಿಲ್ದಾಣದಲ್ಲಿ ಸ್ವಲ್ಪ ಹೆಚ್ಚು ಕಾಲ ನಿಲ್ಲುತ್ತವೆ. ಮತ್ತೆ ಕೆಲವು ಬಹುಬೇಗ ಹೊರಟುಹೋಗುತ್ತವೆ. ಬಹುಶಃ ನಮ್ಮದು ಪಾಸಿಂಗ್ ಸ್ಟೇಷನ್ ಇರಬಹುದು! ನನ್ನ ಜೀವನದಲ್ಲಿ ನನ್ನ 20ನೇ ವರ್ಷದವರೆಗೂ ರೈಲು ಎನ್ನುವುದು ಹಾಸು ಹೊಕ್ಕಾಗಿತ್ತು. ಅದಲ್ಲೇ ರೈಲಿನ ಉದಾಹರಣೆಗಳು ಬಹಳ ಸಲ ನುಸುಳುತ್ತವೆ. ಅರವತ್ತು ವರ್ಷಗಳನ್ನು ನುಂಗಿರುವ ಈ ದೇಹವನ್ನು ಒಂದು ಹಳೆಯ ರೈಲು ನಿಲ್ದಾಣವೆಂದು ಬಗೆದರೆ ಅಲ್ಲಿ ನಿಂತ, ನಿಲ್ಲದೇ ಹೊರಟುಹೋದ ರೈಲುಗಾಡಿಗಳಿಗೆ ಲೆಕ್ಕವಿಲ್ಲ. ಗೆಳೆಯರು ಮತ್ತು ನೆಂಟರು ಇದರ ಮುಖ್ಯ ರೈಲುಗಳು. ಅಪರಿಚಿತರು ಕೂಡ ಉಂಟು. ಅನೇಕ ಅಪರಿಚಿತರು ಗೆಳೆಯರಾಗಿ ನಿಂತಂತೆ, ಅನೇಕ ಗೆಳೆಯರು ಗುರುತೇ ಇಲ್ಲವೇನೋ ಎಂಬಂತೆ ಹೊರಟುಹೋಗಿದ್ದಾರೆ. ಆದರೆ ಒಂದು ಒಳ್ಳೆಯ ಪಾಠವನ್ನು ಎಲ್ಲರೂ ಸೇರಿ ನನಗೆ ಕಲಿಸಿದ್ದಾರೆ. ಬಹಳವೇ ಎಮೋಷನಲ್ ಆಗಿದ್ದವನು ನಾನು. ಬರಬೇಕಾದವರು ಬರದಿರುವುದಿರಲಿ, ಅವರು ಕನಿಷ್ಠಪಕ್ಷ ದೂರವಾಣಿ ಕರೆ ಮಾಡದಿದ್ದರೆ ತಹತಹಿಸುತ್ತಿದ್ದ ಕಾಲವಿತ್ತು. ಈಗಂತೂ ವಾಟ್ಸ್ಯಾಪ್‍ನಲ್ಲಿ ಕೆಲವರ ಸಂದೇಶ ಬರದಿದ್ದರೆ, ಅವರು ನಮ್ಮ ಸಂದೇಶಗಳಿಗೆ ಏಕ ಪದದ ಉತ್ತರವನ್ನಾದರೂ ನೀಡದಿದ್ದರೂ ಪರದಾಡಿದ ಕಾಲವೂ ಇತ್ತು. ಫೆಬ್ರವರಿ 14, 2016. ಅಂದು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಕ...

ಯತಿ ಸ್ವಂತೀ -18

18-1-2018 ನಮ್ಮ ತಾಯ್ತಂದೆಗೆ ನಾವು ಮೂವರು ಮಕ್ಕಳು. ನನ್ನ ಮತ್ತು ನನ್ನ ದೊಡ್ಡ ತಂಗಿ ನಡುವೆ ವಯಸ್ಸಿನ ವ್ಯತ್ಯಾಸ ಕೇವಲ ಒಂದೂವರೆ ವರ್ಷಗಳು. ಆ ನಂತರ ನನ್ನ ಎರಡನೆಯ ತಂಗಿ ಹುಟ್ಟಿದ್ದು ನನಗೆ ಹತ್ತು ವರ್ಷಗಳಾಗಿದ್ದಾಗ. ನನಗೂ, ನನ್ನ ದೊಡ್ಡ ತಂಗಿಗೂ ನಮ್ಮ ಚಿಕ್ಕ ತಂಗಿ ಎಂದರೆ ಒಂದು ಜೀವಂತ ಗೊಂಬೆ! ಸದಾ ಅವಳನ್ನು ಆಟವಾಡಿಸುವುದು (ಮತ್ತು ಗೋಳು ಹುಯ್ದುಕೊಳ್ಳುವುದು!) ನಮ್ಮ ಅತ್ಯಂತ ಒಳ್ಳೆಯ ಟೈಮ್‍ಪಾಸ್. ಅವಳನ್ನು ದುಪ್ಪಟಿಯ ಮೇಲೆ ಮಲಗಿಸಿ ಜೋರಾಗಿ ತೊಟ್ಟಿಲಿನಂತೆ ತೂಗುತ್ತಿದ್ದೆವು. ಅವಳು ನಕ್ಕರೆ ಓಕೆ. ಅವಳು ಅತ್ತರೆ ಅಮ್ಮ ಬಂದು ನಮ್ಮಿಬ್ಬರನ್ನೂ ಗದರಿಸಿ ಅವಳನ್ನೆತ್ತಿಕೊಂಡು ಸಮಾಧಾನ ಮಾಡುತ್ತಿದ್ದರು. ಅವಳಿಗೆ ಸುಮಾರು ಹತ್ತು ತಿಂಗಳಾಗುವ ವೇಳೆಗೆ ನಾಲ್ಕು ಹಲ್ಲುಗಳು ಬಂದಿದ್ದವು. ದಷ್ಟಪುಷ್ಟವಾಗಿ ಬಲು ಮುದ್ದಾಗಿದ್ದಳು. ನಾವಿದ್ದ ರೈಲ್ವೇ ಕಾಲೋನಿಯಲ್ಲಿ ಒಮ್ಮೆ ಬೇಬಿ ಷೋ ಸ್ಪರ್ಧೆ ಇದೆಯೆಂದು ತಿಳಿಯಿತು. ಅಮ್ಮ ಎಲ್ಲೋ ಕೆಲಸದಲ್ಲಿ ನಿರತರಾಗಿದ್ದಾಗ ನಾನು, ನನ್ನ ದೊಡ್ಡ ತಂಗಿ ಮೆಲ್ಲನೆ ನಮ್ಮ ಚಿಕ್ಕ ತಂಗಿಯನ್ನು ಎತ್ತಿಕೊಂಡು ಸ್ಪರ್ಧೆ ನಡೆಯುತ್ತಿದ್ದ ಸ್ಥಳಕ್ಕೆ ನಡೆದೆವು. ಅಮ್ಮ, ಅಪ್ಪನ ಹೆಸರು, ಅವಳ ಹೆಸರು ನೀಡಿ ಜಡ್ಜ್‍ಗಳು ಅವಳನ್ನು ನೋಡುವವರೆಗೂ ಅಲ್ಲಿದ್ದು, ನಂತರ ಅವಳನ್ನೆತ್ತಿಕೊಂಡು ಮನೆಗೆ ಬಂದುಬಿಟ್ಟೆವು. ಸಂಜೆ ಸ್ಪರ್ಧೆಯ ಫಲಿತಾಂಶ ಪ್ರಕಟವಾಗುವಾಗ ಅಮ್ಮನನ್ನೂ, ಅಪ್ಪನನ್ನೂ ಬಲವಂತವಾಗಿ ಕರೆದೊಯ್ದೆವು. ನಮ್...

ಯತಿ ಸ್ವಂತೀ -17

17-1-2018 ನನ್ನ ಸೋದರತ್ತೆಯ ಮಕ್ಕಳಲ್ಲಿ ನನಗೆ ಬಹಳ ಇಷ್ಟವಾದವರು ಅನೇಕ. ನನ್ನ ತಂದೆಯವರಿಗೆ ಐವರು ತಂಗಿಯರು. ಏಳು ಜನ ಹೆಣ್ಣು ಕಸಿನ್‍ಗಳು, ಆರು ಗಂಡು ಕಸಿನ್‍ಗಳಿದ್ದಾರೆ. ಕೇವಲ ಇಬ್ಬರು ಗಂಡು ಕಸಿನ್‍ಗಳು ಮಾತ್ರ ನನಗಿಂತ ಚಿಕ್ಕವರು. ಇವರಲ್ಲಿ ಯಾರು ಮನೆಗೆ ಬಂದರೂ ನನಗೂ ನನ್ನ ತಂಗಿಗೂ ಬಹಳ ಖುಷಿ. ಅಬ್ಬಾ! ಕೆಲವು ದಿನ ಚೆನ್ನಾಗಿರುತ್ತದೆ ಎಂದುಕೊಳ್ಳುತ್ತಿದ್ದೆವು. ಅದರಲ್ಲಿ ಒಬ್ಬಳು ನಮಗೆ ಕಥೆ ಹೇಳುತ್ತಿದ್ದಳು. ಶರ್ಮೀಲೀ ಚಿತ್ರವನ್ನು ಆಗ ನೋಡಲಾಗದಿದ್ದ ವ್ಯಥೆಯನ್ನು ಇವಳು ಅದರ ಇಡೀ ಕಥೆಯನ್ನು ಹೇಳಿ ತುಂಬಿಕೊಟ್ಟಳು! ಅವಳು ಮೈಸೂರಿಗೆ ನಮ್ಮ ಮನೆಗೆ ಬಂದಾಗ ನೋಡಿದ ಎರಡು ಸಿನಿಮಾಗಳ ಕಥೆ ಹೇಳಿದ್ದು ಇಂದಿಗೂ ನೆನಪಿದೆ. ಸುರುಳಿರಾಜನ್ ಮನೋರಮಾ ಅಭಿನಯದ ಕಣ್‍ಕಾಚ್ಚಿ ಮತ್ತು ಜ್ಯೋತಿಲಕ್ಷ್ಮಿ ಅಭಿನಯದ ಒಕ ನಾರಿ ವಂದ ತುಪಾಕುಲು. ಈ ಚಿತ್ರಗಳ ಇಡೀ ಕಥೆಯನ್ನು ಬಿಡಿಸಿ ನಿಧಾನವಾಗಿ, ಸ್ವಾರಸ್ಯವಾಗಿ ಹೇಳಿದ್ದಳು. ಅವಳೊಬ್ಬ ಕಲಾವಿದೆ. ಕೈಯಲ್ಲಿ ಎಂತಹ ಕುಸುರಿ ಕೆಲಸ ಮಾಡಬಲ್ಲಳೆಂದು ನೋಡಲು ಅವಳು ಮಾಡಿರುವ ಕೆಲವು ಕ್ರಿಯೆಗಳನ್ನು ನೋಡಬೇಕು. ಪ್ರತಿ ವರ್ಷ ಜನವರಿಯಲ್ಲಿ ಅವಳ ತಾಯಿಯ ಮನೆಗೆ ಮಲ್ಲೇಶ್ವರಂ ಶ್ರೀಕೃಷ್ಣ ದೇವಾಲಯದಿಂದ ಉತ್ಸವಮೂರ್ತಿ ಬಂದು, ಇವರ ಮನೆಯ ಮುಂದೆ ಅಲಂಕಾರಗೊಳ್ಳುತ್ತದೆ. ಒಳಗೆ ಏನಾದರೊಂದು ಯಕ್ಷಿಣಿ ಮಾಡಿರುತ್ತಾಳೆ. ಕೊಬ್ಬರಿ ಅಥವಾ ಚಿನ್ನಾರಿ ಅಥವಾ ಇನ್ಯಾವುದರಲ್ಲಾದರೂ ವಿಶೇಷವಾದ ಕೃಷ್ಣ ಸಂಬಂಧೀ ಘಟನೆಯನ್ನು ಸ...

ಯತಿ ಸ್ವಂತೀ -16

16-1-2018 ನಿಮಗೆ ಏನೇನೋ ವಿಷಯ ಹೇಳಬೇಕು ಎಂದು ಅಂದುಕೊಳ್ಳುತ್ತಿರುತ್ತೇನೆ. ಆದರೆ ಬರೆಯಲು ಕೂತಾಗ ಅನೇಕ ಸಂಗತಿಗಳು ನೆನಪಿಗೇ ಬರುವುದಿಲ್ಲ. ವಯಸ್ಸಾಯ್ತಲ್ಲ! ಕೆಲವೊಮ್ಮೆ ನನ್ನ ವೃತ್ತಿ, ಪ್ರವೃತ್ತಿ ಮತ್ತು ನಿವೃತ್ತಿ ಜೀವನಗಳನ್ನು ನೆನೆಸಿಕೊಂಡರೆ ಅಚ್ಚರಿ ಎನಿಸುತ್ತದೆ. 1980ರಿಂದ ಸರಿಸುಮಾರು 2015ರ ವರೆಗೆ ನಿಲುಗಡೆರಹಿತ ಉದ್ಯೋಗ. ಹ್ಞಾಂ... 2001ರ ಜನವರಿಯಿಂದ 2002 ಜೂನ್ ವರೆಗೆ ನನ್ನ ಬದುಕಿನ ಬವಣೆಯ ಕಾಲ. ಹಣವಿಲ್ಲ, ಕೆಲಸವಿಲ್ಲ, ಸಮಯ ಹೋಗುತ್ತಿರಲಿಲ್ಲ, ಮನೆಯಲ್ಲಿ ನನ್ನನ್ನೂ ಸೇರಿ ಐದು ಜನ ಸದಸ್ಯರು! ಅಬ್ಬಾ! ಒಂದು ರೀತಿಯ ಪರೀಕ್ಷಾ ಕಾಲವದು. ಬರೆಯುವ ಅಭ್ಯಾಸ ನನ್ನನ್ನು ಅಂಟಿಕೊಂಡಿದ್ದು 89ರಲ್ಲಿ. ಅದಕ್ಕೆ ಮುಂಚೆ ನಮ್ಮ ಅಖಿಲ ಭಾರತ ಪ್ರವಾಸ ಮತ್ತು ನನ್ನ ಗೋಣಿಬೀಡು ಭೇಟಿಯ ಬಗ್ಗೆ ಗೀಚಿದ್ದು ನೆನಪಿದೆ. ಮಿನಿ ಕಾದಂಬರಿಯೊಂದನ್ನು ಬರೆದು ಎರಡು ವರ್ಷಗಳ ನಂತರ ಧೈರ್ಯ ಮಾಡಿ ನನ್ನ ತಂಗಿಗೆ ಕೊಟ್ಟೆ. ಅವಳು ಓದಿ ಒಪ್ಪಿದ ಮೇಲೆ ಪತ್ರಿಕೆಯೊಂದಕ್ಕೆ ಕೊಟ್ಟೆ. ಕಥೆ ಚೆನ್ನಾಗಿತ್ತೆಂದೋ ಅಥವಾ ನನ್ನಿಂದ ಅವರಿಗೆ ಒಂದು ಚಿಕ್ಕ ಸಹಾಯವಾಯಿತೆಂದೋ ನನ್ನ ‘ನಿರೀಕ್ಷೆ’ ಪ್ರಕಟವಾಗಿ ಕಥೆಗಾರನಾಗುವ ನನ್ನ ನಿರೀಕ್ಷೆಯನ್ನು ಸಫಲ ಮಾಡಿತು. ಆಮೇಲೆ ಕಂಡಿದ್ದೆಲ್ಲಾ ಕಥೆಗಳೇ. ಒಮ್ಮೆ ಅಂಗಡಿಗೆ ಹೋಗಿ ಮಂಗಳವನ್ನು ತಿರುಗಿಸಿ ನೋಡಿ ಖುಷಿಯಿಂದ ಮೂರ್ಛೆ ಹೋಗುವವನಿದ್ದೆ. ನನ್ನ ಕಥೆ ವಿಪರ್ಯಾಸ ಅದರಲ್ಲಿ ಪ್ರಕಟವಾಗಿತ್ತು. ಆಗೆಲ್ಲಾ ನಾನು ಎಂ...

ಯತಿ ಸ್ವಂತೀ - 15

15-1-2018 ನಾಲ್ಕು ದಿನಗಳ ಹಿಂದೆ ಪಾರ್ಕ್‍ಗೆ ಎಂದಿನಂತೆ ವಾಕಿಂಗ್‍ಗೆ ಹೋದಾಗ ನಮ್ಮ ವಾರ್ಡ್‍ನ ಕಾರ್ಪೋರೇಟರ್ ಪಾರ್ಕ್‍ನಲ್ಲಿ ಕಸರತ್ತು ಮಾಡುತ್ತಿದ್ದ ಪುರುಷರೊಂದಿಗೆ ಮಾತಾಡುತ್ತಿದ್ದರು. ನಾನು ನನ್ನ ಪಾಡಿಗೆ ನನ್ನ ರೌಂಡು ಹೋದೆ. ನಂತರ ಪಾರ್ಕಿನ ಮತ್ತೊಂದು ಬದಿಗೆ ಬಂದಾಗ ಎದುರಿಗೆ ಬಂದ ಕಾರ್ಪೋರೇಟರ್ ಅಲ್ಲಿನ ಮಂಟಪವೊಂದರಲ್ಲಿ ಹಾ ಹೂ ಎಂದು ಕೂಗುತ್ತಾ ಮೈಯೆಲ್ಲವೂ ಸಡಿಲವಾಗುವಂತೆ ಕಸರತ್ತು ಮಾಡುತ್ತಿದ್ದ ಮಹಿಳೆಯರ ಗುಂಪಿನತ್ತ ನಡೆದರು. ನಾನೂ ಅವರನ್ನು ಹಿಂಬಾಲಿಸಿದೆ. ಅವರು ಹಠಾತ್ತನೆ ನನ್ನನ್ನು ನೋಡಿ, ನನ್ನನ್ನು ಗುರುತು ಹಿಡಿದು ಚೆನ್ನಾಗಿದ್ದೀರಾ ಎಂದರು. ಎರಡು ಮೂರು ತಿಂಗಳ ಹಿಂದೆ ಆಸ್ಪತ್ರೆಯೊಂದರ ಉದ್ಘಾಟನೆ ನೋಡಲು ಹೋದ ನನ್ನನ್ನು ಕೂಡ ಆ ಕಾರ್ಪೋರೇಟರ್ ಜೊತೆಗೆ ದೀಪದ ಬತ್ತಿಯೊಂದನ್ನು ಹೊತ್ತಿಸಿ, ಉದ್ಘಾಟನೆ ಮಾಡುವಂತೆ ಮಾಡಿದ್ದರು ನನ್ನ ಗೆಳೆಯ ದಂಪತಿ. ಅಂದು ಅವರೊಂದಿಗಿದ್ದ ನನ್ನನ್ನು ಅವರು ಇಂದು ಗುರುತಿಸಿದ್ದು ನನ್ನ ಪುಣ್ಯವಿಶೇಷವೇ ಸರಿ. ಏಕೆಂದರೆ ನಾನೇನೂ ತಕ್ಷಣ ಗುರುತು ಹಿಡಿಯುವಂತಹ ಜನಪ್ರಿಯ ವ್ಯಕ್ತಿಯೇನಲ್ಲ. ಕಾರ್ಪೋರೇಟರ್ ಅವರಿಗೆ ಅಲ್ಲಿದ್ದ ಹೆಂಗಸರು ಮಂಟಪವನ್ನು ಕಟ್ಟಿಸಿದ್ದಕ್ಕೆ, ಬೆಂಚುಗಳನ್ನು ಹಾಕಿಸಿದ್ದಕ್ಕೆ ಧನ್ಯವಾದ ಹೇಳಿದಾಗ, ಒಬ್ಬ ವಯಸ್ಸಾದ (ಬೈಯಬೇಡಿ. ಇದೊಂದು ಹೋಲಿಕೆಯ ಪದ!) ಮಹಿಳೆ ‘ಸಾರ್, ಎಲ್ಲಾ ಓಕೆ. ಟಾಯೆಟ್ ಇಲ್ಲ ಯಾಕೆ?’ ಎಂದರು. ಹೌದು, ಆ ಪಾರ್ಕ್‍ನಲ್ಲಿ ಟಾಯ್ಲೆಟ್ ಇಲ್ಲ. ಟಾಯ್ಲೆ...

14

14-1-2018 ನನ್ನ ಮಗ ಸಿಕ್ಕಾಪಟ್ಟೆ ಪುಸ್ತಕಗಳನ್ನು ಓದುತ್ತಿದ್ದ. ಅವನಿಗೆ ದ ಡಾವಿಂಚಿ ಕೋಡ್ ಬಹಳ ಇಷ್ಟವಾಗಿಬಿಟ್ಟಿತು. ಈಗೆಲ್ಲಾ ನಾನು ಯಾವುದಾದರೂ ಪುಸ್ತಕ ಓದಬೇಕೆಂದರೆ ಅದು ನನ್ನ ಮಗನ ರೆಕಮೆಂಡೇಷನ್ ಆಗಿರುತ್ತದೆ. ಯಾವುದಾದರೂ ಭಾಷೆಯ ಯಾವುದಾದರೂ ಸಿನಿಮಾ, ಆಂಗ್ಲ ಧಾರಾವಾಹಿ ಎಲ್ಲವೂ ಅವನದೇ ಶಿಫಾರಸ್ಸು! ಕೆಲವೊಮ್ಮೆ ಹೊಸ ಹಿಂದೀ ಸಿನಿಮಾಗಳ ಟ್ರೈಲರ್‍ಗಳನ್ನು ನನಗೆ ಕಳಿಸಿ (ಪ್ರಸ್ತುತ ಅಮೆರಿಕದಲ್ಲಿ ಕೆಲಸದಲ್ಲಿದ್ದಾನೆ) ಫೋನ್ ಮಾಡಿದಾಗ ‘ನೋಡಿದಿರಾ?’ ಎಂದು ರಿಮೈಂಡ್ ಬೇರೆ ಮಾಡುತ್ತಾನೆ! ಡಾವಿಂಚಿ ಕೋಡ್ ಓದಿದ. ಬಹಳ ಇಷ್ಟವಾಯಿತು ಅವನಿಗೆ. ನಾನು ಸಿನಿಮಾ ನೋಡಲು ಹೊರಟೆ. ಏಕೆಂದರೆ ಕರ್ಮವೀರ ಪತ್ರಿಕೆಗೆ ಲೇಖನ ಬರೆಯಬೇಕಿತ್ತು. ನಾನೂ ಬರ್ತೀನಿ ಎಂದ. ಮಗನೇ ನಿನಗಿನ್ನೂ ಹದಿನೇಳು ವರ್ಷಗಳು. ಪಿವಿಆರ್‍ನಲ್ಲಿ ಒಳಗೆ ಬಿಡೋದಿಲ್ಲ. ಇದು ವಯಸ್ಕರಿಗೆ ಮಾತ್ರ ಸಿನಿಮಾ ಎಂದೆ. ಕೇಳಬೇಕಲ್ಲ! ನನಗೆ ಗೊತ್ತಿಲ್ಲ, ನನ್ನನ್ನು ಕರೆದುಕೊಂಡು ಹೋಗು ಎಂದು ಒಂದೇ ಹಟ. ಸರಿ, ನಿಟ್ಟುಸಿರುಬಿಟ್ಟು ನನ್ನ ತಂಗಿಯ ಮನೆಗೆ ಹೋದೆ. ಅಂದಿಗೆ ಸರಿಯಾಗಿ ನನ್ನ ಚಿಕ್ಕ ತಂಗಿಯ ಮಗನಿಗೆ ಹದಿನೆಂಟು ವರ್ಷಗಳು ತುಂಬಿದ್ದವು. ತಂಗಿಯನ್ನು ಕೇಳಿ, ಅವಳ ಮಗನ ಜನನ ಪ್ರಮಾಣಪತ್ರವನ್ನು ಜೇಬಿಗೆ ಹಾಕಿಕೊಂಡೆ. ನಾನು, ನನ್ನ ಮಗ ಸಿನಿಮಾಗೆ ಹೋದೆವು. ಟಿಕೆಟ್ ಪಡೆದು ಇನ್ನೇನು ಚಿತ್ರಮಂದಿರ ಪ್ರವೇಶಿಸಬೇಕು, ಆಗ ಬಾಗಿಲಲ್ಲಿ ನಮ್ಮ ಟಿಕೆಟ್ ಕತ್ತರಿಸಿದಾತ, ‘ಇವರಿಗೆ ಹದ...

13

13-1-2018 ಡಾ. ಬಾಬು ಕೃಷ್ಣಮೂರ್ತಿಯವರು ನನ್ನ ಗುರು ಸಮಾನರು. ಅನೇಕ ಸಲ ನನಗೆ ಅವರಿಂದ ನನ್ನ ಬರವಣಿಗೆಗೆ ಪ್ರೇರಣೆ ದೊರಕಿದೆ. ಅವರು ಮಂಗಳ ಮತ್ತು ಕರ್ಮವೀರ ಪತ್ರಿಕೆಗಳಿಗೆ ಸಂಪಾದಕರಾಗಿದ್ದಾಗ ನನ್ನ ಅನೇಕ ಕಥೆ ಮತ್ತು ಲೇಖನಮಾಲೆಗಳು ಪ್ರಕಟವಾಗಿವೆ. ಮಲ್ಲಾರ ಮಾಸಿಕದಲ್ಲಿ ನನ್ನ ದಾಸವಾಣಿ (ಪುರಂದರ ದಾಸರ ಪದಗಳ ಬಗ್ಗೆ ನನ್ನ ವಿಶ್ಲೇಷಣೆ) ಧಾರಾವಾಹಿ ಆಗಿ ಪ್ರಕಟವಾದ ನಂತರ ಈಗ ಶ್ರೀ ವಿಷ್ಣು ಸಹಸ್ರನಾಮದ ಮಹಿಮೆ ಧಾರಾವಾಹಿ ಆಗಿ ಹರಿದು ಬರುತ್ತಿದೆ. ಅವರು ನನಗೆ ‘ಸಿನ್ಸಿಯರ್ ರೈಟರ್’ ಎಂದು ಪ್ರೀತಿಯಿಂದ ಕರೆಯುತ್ತಾರೆ. ಆ ನಿಯತ್ತನ್ನು ಉಳಿಸಿಕೊಂಡೇ ಬರೆಯುವ ನನ್ನ ಪ್ರಯತ್ನ ಮುಂದುವರಿದಿದೆ. ನಾನು ಬರೆದ ನಂತರ ನನಗೇ ಇಷ್ಟವಾಗದ್ದನ್ನು ಮುಲಾಜಿಲ್ಲದೇ ಪಕ್ಕಕ್ಕಿಟ್ಟಿರುವ ಸನ್ನಿವೇಶಗಳು ಬಹಳವಿವೆ. ಒಮ್ಮೆ ನನಗೆ ಫೋನ್ ಮಾಡಿ, ಆಗ ತನ್ನ ಕಾಂಟ್ರೋವರ್ಸಿಗಳಿಂದ ‘ಜನಪ್ರಿಯ(!)’ವಾಗುತ್ತಿದ್ದ ದ ಡಾವಿಂಚಿ ಕೋಡ್ ಬಗ್ಗೆ ಬರಿ ಎಂದರು. ಪುಸ್ತಕ ಓದು, ಸಿನಿಮಾ ನೋಡು ಹಾಗೆಯೇ ಡಾ ವಿಂಚಿಯ ಬಗ್ಗೆ ಕೂಡ ಕೆಲವು ಮಾಹಿತಿ ಇರಲಿ ಎಂದು ಸಲಹೆ ಮಾಡಿದರು. ಪುಸ್ತಕ ಓದಿದೆ. ಎಂತಹ ರೇಸಿ ಥ್ರಿಲ್ಲರ್ ಬರೆದಿದ್ದಾನೆ ಡ್ಯಾನ್ ಬ್ರೌನ್ ಎನಿಸದಿರದು ಅದನ್ನು ಓದಿದರೆ. ನಂತರ ಸಿನಿಮಾ ಬಂದಿತು. ಅದನ್ನು ನೋಡಲು ಕೋರಮಂಗಲದ ಪಿವಿಆರ್ ಸಿನಿಮಾಗೆ ಹೋಗಲು ಸಿದ್ಧನಾದೆ. ಇಲ್ಲಿ ಒಂದು ಚಿಕ್ಕ ಉಪಕಥೆ. ನಾನು ಇಂಗ್ಲೀಷ್ ಪುಸ್ತಕಗಳನ್ನು ಓದಲಾರಂಭಿಸಿದ್ದು ನನ್ನ 15ನೆಯ ವಯ...

12

12-1-2018 ಹಿಂದೆಲ್ಲಾ ಸಿನಿಮಾ ಎಂದರೆ ಹುಚ್ಚು. ಈಗ ಇಲ್ಲ ಎಂದಲ್ಲ, ಹುಚ್ಚು ಕಡಿಮೆ ಆಗಿದೆ!! ನಾನು ಹತ್ತನೇ ತರಗತಿಯಲ್ಲಿದ್ದಾಗ ಒಂದು ಸಿನಿಮಾ ಬಂದಿತ್ತು. ಹಿಂದೀ ಭಾಷೆಯದು. ಅಷ್ಟು ಹೊತ್ತಿಗೆ ನಾನು ಆರಾಧನಾ ಚಿತ್ರವನ್ನು ನೋಡಿ ಆಗಿತ್ತು. ಬೆಂಗಳೂರು ಸಂಗಂ ಥಿಯೇಟರ್‍ನಲ್ಲಿ... (ಈಗ ಅದು ಇಲ್ಲ. ಧರ್ಮಾಂಬುಧಿ ಕೆರೆ ಎದುರಿಗೆ.... ಸುಭಾಷ್‍ನಗರದ ಎದುರಿಗೆ... ಬಸ್‍ಸ್ಟಾಂಡ್ ಕಣ್ರೀ) ನಾನು ನನ್ನ ತಂಗಿ, ನನ್ನ ದೊಡ್ಡಮ್ಮನ ಮಗಳು ಹೋದ ಹಾಗೆ ನೆನಪು. ನನಗಿಂತ ಒಂದು ವರ್ಷ ಚಿಕ್ಕವಳು ನನ್ನ ದೊಡ್ಡಮ್ಮನ ಮಗಳು. ಅವಳಿಗಿಂತ ಒಂದು ವರ್ಷ ಚಿಕ್ಕವಳು ನನ್ನ ದೊಡ್ಡ ತಂಗಿ. ನನಗಾಗ ಹನ್ನೆರಡು ವರ್ಷಗಳು! ನನ್ನ ದೊಡ್ಡಪ್ಪ ರೈಲ್ವೇಯಲ್ಲಿ ಕೆಲಸದಲ್ಲಿದ್ದರು. ಅವರ ಮನೆ ಸ್ಟೇಷನ್ ಎದುರಿಗಿನ ಕ್ವಾರ್ಟರ್ಸ್‍ನಲ್ಲಿತ್ತು. ಕಲ್ಲಿನ ಮನೆ ಆಗ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಬಗ್ಗೆ ನಾನು ಹೇಳ್ತಿರೋದು. ಹ್ಞಾಂ... ಆಗ ಆರಾಧನಾ ನೋಡಲು ಮನೆಯಿಂದ ಹೊರಗೆ ಬಂದು ತೋಟದಪ್ಪನ ಛತ್ರದ ರಸ್ತೆ ದಾಟಿ, ಸುಭಾಷ್‍ನಗರದ ನಡುವಿನ ರಸ್ತೆಯಲ್ಲಿ ನಡೆದು ಟ್ಯಾಂಕ್‍ಬಂಡ್ ರಸ್ತೆಗೆ ಬಂದರೆ ಅಲ್ಲೇ ಸಂಗಂ ಥೇಟರ್ರು. ಈಗ ಮೈಸೂರಿಗೆ ಬರೋಣ. ಒಂದೊಳ್ಳೆಯ ಸಿನಿಮಾ ಬಂದಿತ್ತು. ಅಮ್ಮನನ್ನು ಕೇಳಿದೆ. ನೋಡೋಣ ಎಂದುಬಿಟ್ಟರು. ಅವರ ಹಿಂದೀ ಸಿನಿಮಾ ಗೆಳತಿ ಪದ್ಮ ಅವರ ಮನೆಗೆ ಹೋಗಿ ಅವರನ್ನು ‘ಅಮ್ಮ, ನಿಮ್ಮನ್ನು ಈವತ್ತು ಸಿನಿಮಾಗೆ ಬರಹೇಳ್ತಿದ್ದಾರೆ. ಹೋಗಕ್ಕೆ ಆಗತ...

11

11-1-2018 ಒಬ್ಬ ಮನುಷ್ಯನ ನಾನಾ ಮುಖಗಳನ್ನು ಇಂದು ನೋಡಿದ ಅನುಭವವಾಯಿತು. ಹೇಗಂತೀರಾ? ‘ನೀನೆಲ್ಲಿ ಹೋದೆ ಎಂದು ಹೇಳು, ಈ ಮತ್ತಿನ ರಾತ್ರಿಯಲ್ಲಿ’ ಎಂದು ಆರಂಭಿಸಿದ ಮನುಷ್ಯ ಎರಡು ನಿಮಿಷಗಳ ನಂತರ ‘ನಿನ್ನ ಮನೆಯ ಎದುರಿಗೆ ಒಂದು ಮನೆ ಕಟ್ಟುತ್ತೀನಿ’ ಎಂದ. ಅವಳು ‘ನೋಡೋಣ’ ಎಂದಳು. ನಂತರ ಇದ್ದಕ್ಕಿದ್ದಂತೆ ಪ್ಲೇಟು ಬದಲಾಯಿಸಿ, ಮತ್ತೊಬ್ಬ ಹುಡುಗಿಯೊಂದಿಗೆ ‘ಹೃದಯ ಕೂಗಿದೆ ಬಾರಾ ಬಾರಾ’ ಎಂದ. ಅವಳು ‘ನನ್ನೆಲ್ಲವನ್ನೂ ತೆಗೆದುಕೊಂಡು ನಿನ್ನೊಂದಿಗೆ ಬರುತ್ತೇನೆ’ ಎಂದಳು. ಅಷ್ಟರಲ್ಲಿ ಅವನ ಮೂರನೆಯ ಪ್ರೇಮಿ, ‘ನಿನ್ನಂತಹ ಬಣ್ಣ ಬದಲಾಯಿಸುವ ಗೋಸುಂಬೆಯನ್ನು ಕಂಡೇ ಇಲ್ಲ.  ನನ್ನೊಂದಿಗೆ ಹಳ್ಳಿಯಲ್ಲಿ ಏನೇನೋ ವಚನ ನೀಡಿ, ಈಗ ಇನ್ನೊಬ್ಬಳ ಬಾಹುಗಳೊಳಗೆ ಇದ್ದೀಯಲ್ಲಾ, ಇದು ನ್ಯಾಯವಾ?’ ಎಂದಳು. ಅವನು ಅದಕ್ಕೆ ಸುಮ್ಮನೆ ಇದ್ದ. ಏಕೆಂದರೆ ಅವನ ಮನದಲ್ಲಿ ‘ರಾತ್ರಿ ಏಕಾಂಗಿ. ದೀಪಗಳು ಆರಿವೆ. ಹತ್ತಿರ ಬಂದು ನನ್ನ ಕಿವಿಗಳಲ್ಲಿ ಏನು ಬೇಕಾದರೂ ಹೇಳಿ’ ಎನ್ನುತ್ತಿದ್ದಳು! ವಿಶೇಷವೆಂದರೆ ಇವೆಲ್ಲವೂ ಒಬ್ಬನೇ ನಾಯಕನ ಸಿನಿಮಾದ ಹಾಡುಗಳ ಮೊದಲ ಸಾಲುಗಳು! ಯೂಟ್ಯೂಬ್‍ನಲ್ಲಿ ನವ್‍ಕೇತನ್ ಫಿಲ್ಮ್ಸ್ ಸಾಂಗ್ಸ್ ಅಂತ ಒಂದು ಫೈಲ್ ಇದೆ. ಅಬ್ಬಾ! ದೇವ್ ಆನಂದನ ನಿರ್ಮಾಣದ ಎಲ್ಲ ಸಿನಿಮಾಗಳ ಗೀತೆಗಳಿವೆ. ಮಧುರ ಗೀತೆಗಳು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಗೈಡ್, ಜ್ಯೂಯೆಲ್ ಥೀಫ್, ಪ್ರೇಮ್‍ಪೂಜಾರಿ... ಹೀಗೆ ಅದೆಂತಹ ಮಾಧುರ್ಯ. ಹಸ್ತಾ ಹುವ ಬಚ್‍ಪನ್...

10

10-1-2018 ಒಂದು ಚಿಕ್ಕ ಡಬ್ಬ ತೆಗೆದುಕೊಂಡು ಅದರೊಳಗೆ ಒಂದು ಕಲ್ಲನ್ನು ಹಾಕಿ, ಮುಚ್ಚಳ ಮುಚ್ಚಿ ಅದನ್ನು ಮಹಾಶಕ್ತಿವಂತನೊಬ್ಬ ಗರಗರನೆ ಆಡಿಸುತ್ತಿದ್ದರೆ, ಆ ಕಲ್ಲಿಗೆ ಜೀವವಿದ್ದರೆ ಅದಕ್ಕೆ ಹೇಗಿರುತ್ತಿತ್ತು? ಕಲ್ಪಿಸಿಕೊಳ್ಳಲು ಕಷ್ಟ ಅಲ್ಲವೇ? ಇದು ಬಹಳ ಜನಗಳ ಪರಿಸ್ಥಿತಿಯೂ ಹೌದು. ನನ್ನದೂ ಇದಕ್ಕೆ ಅಪವಾದವೇನಲ್ಲ! ಆದರೆ ಇಂತಹ ಒಂದು ಸನ್ನಿವೇಶವನ್ನು ಚಿತ್ರವೊಂದರಲ್ಲಿ ಕಂಡಿದ್ದೇನೆ. ಹೀಗೇ ಒಬ್ಬ ದೇಶಭಕ್ತ. ಅವನ ಕೈಗೆ ಸಿಕ್ಕಿ ಬೀಳುತ್ತಾನೆ ಒಬ್ಬ ದೇಶದ್ರೋಹಿ. ಈ ದೇಶದ್ರೋಹಿಗಳಿಗೆ ಮೊದಲು ಕೊಡುವ ತರಬೇತಿ ಏನು ಗೊತ್ತೇ? ಎಂತಹ ನೋವನ್ನಾದರೂ ತಡೆದುಕೊಳ್ಳುವ ಶಿಕ್ಷೆ. (ಅಮೆರಿಕದಂತಹ ದೇಶಗಳಲ್ಲಿ ಅವರ ಗೂಢಚಾರರಿಗೂ ಇಂತಹ ತರಬೇತಿ ಉಂಟಂತೆ). ಈ ದೇಶದ್ರೋಹಿಗೆ ಗೂಢಚಾರಿ ಸಂಸ್ಥೆಯ ಒಬ್ಬ ಉದ್ಯೋಗಿ ಸಹಾಯ ಮಾಡುತ್ತಿರುತ್ತಾನೆ. ಅದಕ್ಕೇ ಈ ದೇಶದ್ರೋಹಿ ಸುಲಭವಾಗಿ ತಪ್ಪಿಸಿಕೊಳ್ಳುತ್ತಿರುತ್ತಾನೆ. ಆಗ ದೇಶಭಕ್ತನ ಕೈಗೆ ಸಿಕ್ಕಿಬಿದ್ದ ದೇಶದ್ರೋಹಿಗೆ ಆಗುವ ಶಿಕ್ಷೆ ನೋಡಿ. ಅವನನ್ನು ಕಾರಿನ ಮುಂಭಾಗಕ್ಕೆ ಕಟ್ಟಿ, ಕಾರನ್ನು ಒಂದು ನಿರ್ಜನ ಪಾರ್ಕಿಂಗ್ ಸ್ಥಳದಲ್ಲಿ ವೇಗವಾಗಿ ಅಲ್ಲಿಂದ ಇಲ್ಲಿಗೆ ಓಡಿಸುತ್ತಾ, ಸರ್ರೆಂದು ತಿರುಗಿಸುತ್ತಾನೆ. ಆ ದೇಶದ್ರೋಹಿಯ ಕೈಗಳನ್ನು ಮಾತ್ರ ಕಟ್ಟಿ ಹಾಕಿರುವುದರಿಂದ ಅವನ ಇಡೀ ದೇಹ ಅತ್ತಿಂದಿತ್ತ ಅಲುಗಾಡಿ, ಅವನು ಚೀರಿ, ಬಾಯ್ಬಿಡಲು ಸಿದ್ಧನಾಗುತ್ತಾನೆ. ಆದರೆ ನಾವು ನಮ್ಮ ಜೀವನದಲ್ಲಿ ಬಾಯಿ ಬಿಡಬೇಕಿಲ್ಲ. ...

ಜೀವನದೊಂದಿಗೆ ನಿಭಾವಣೆ

-9- 9-1-2018 ನಾನು ಜೀವನದೊಂದಿಗೆ ನಿಭಾಯಿಸುತ್ತಾ ಹೊರಟುಹೋದೆ. ಪ್ರತಿ ಚಿಂತೆಯನ್ನು ಕೂಡ ಹೊಗೆಯಲ್ಲಿ ಹಾರಿಸಿದೆ. ವಿನಾಶಗಳ ಬಗ್ಗೆ ದುಃಖಿಸುವುದು ವ್ಯರ್ಥವೆನಿಸಿದೆ. ಅದಕ್ಕೇ...  ನಾನು ವಿನಾಶಗಳನ್ನು ಸಂಭ್ರಮಿಸುತ್ತಾ ಹೊರಟುಹೋದೆ. ಏನು ಸಿಕ್ಕಿತೋ ಅದನ್ನು ನಿಯತಿ ಎಂದುಕೊಂಡೆ. ಕಳೆದುಹೋಗಿದ್ದನ್ನು ನಾನು ಮರೆಯುತ್ತಾ ಹೊರಟುಹೋದೆ. ದುಃಖ ಮತ್ತು ಖುಷಿಗಳ ನಡುವೆ ಎಲ್ಲಿ ವ್ಯತ್ಯಾಸವಿಲ್ಲವೋ... ನನ್ನ ಹೃದಯವನ್ನು ಆ ತಿರುವಿಗೆ ಕರೆದುಕೊಳ್ಳುತ್ತಾ ಹೋದೆ. ಎಂತಹ ಸುಂದರ ಕವಿತೆ! ಅದಕ್ಕೆ ಅಂದದ ಸಂಗೀತ. ಮಧುರ ಕಂಚಿನ ಕಂಠದ ಗಾಯನ. ಮಹಾನ್ ಕವಿ ಸಾಹಿರ್ ಲೂಧಿಯಾನ್ವಿಯವರ ಗೀತೆ. ಗೊತ್ತಾಯಿತಾ ಯಾವ ಹಾಡಿನ ಬಗ್ಗೆ ಹೇಳುತ್ತಿರುವೆನೆಂದು? ಹಂ ದೋನೋ (1961) ಚಿತ್ರದ ‘ಮೈ ಜಿóಂದಗೀ ಕಾ ಸಾಥ್ ನಿಭಾತಾ ಚಲಾಗಯಾ’ ಬಗ್ಗೆ ನಾನು ಹೇಳುತ್ತಿರುವುದು. ಜೀವನದ ಬಗ್ಗೆ ಅನೇಕ ಗೀತೆಗಳು ನಮ್ಮ ಹಳೆಯ ಗೀತೆಗಳಲ್ಲಿವೆ. ಇದರಲ್ಲಿ ಬದುಕಿನ ಸಂತಸದ ಕ್ಷಣಗಳನ್ನು ಹೇಗೆ ಉಳಿಸಿಕೊಳ್ಳುತ್ತಾ ಜೀವಿಸಬಹುದೆಂದು ಬಲು ಸುಂದರವಾಗಿ ಹೇಳಿದ್ದಾರೆ ಸಾಹಿರ್. ಜೈದೇವ್ ಅವರ ಸಂಗೀತವೂ ಬಹಳವೇ ಅಂದ. ಇದರಲ್ಲಿ ಇನ್ನೂ ಒಂದು ಗೀತೆ ಇದೆ. ಅದು ಅಳುವುದರ ಬಗ್ಗೆ. ಕೆಲವೊಮ್ಮೆ ನನ್ನ ಬಗ್ಗೆ, ಕೆಲವೊಮ್ಮೆ ನನ್ನ ಪರಿಸ್ಥಿತಿಯ ಬಗ್ಗೆ ಅಳು ಬಂದಿತು. ಬಹುಶಃ ಈ ಚಿತ್ರದಲ್ಲಿನ ದ್ವಿಪಾತ್ರದಲ್ಲಿನ ಮತ್ತೊಂದು ಪಾತ್ರ ಅಳುವುದಕ್ಕೆಂದೇ ಸೃಷ್ಟಿಯಾಗಿರಬೇಕು. ಏಕೆಂದರೆ ಹಿಂದಿನ...

8

8-1-2018 1980ರಲ್ಲಿ ನಾನು ಉದ್ಯೋಗಕ್ಕಾಗಿ ಹುಡುಕುತ್ತಿರುವಾಗ ನನ್ನ ಹತ್ತಿರದ ಬಂಧುವೊಬ್ಬರು, ‘ನೀನೇ ಪ್ರಯತ್ನ ಮಾಡಿ ಕೆಲಸ ಗಿಟ್ಟಿಸು. ಅವಮಾನಗಳನ್ನು ಕೂಡ ನೀನು ನುಂಗಿ ಬೆಳೆಯಬೇಕು’ ಎಂದರು. ಅದರ ಮೊದಲ ಹೆಜ್ಜೆಯಾಗಿ ಡೆಕ್ಕನ್ ಹೆರಾಲ್ಡ್‍ನಲ್ಲಿ ಬಂದಿದ್ದ ಒಂದು ಪುಟ್ಟ ಜಾಹೀರಾತು ನೋಡಿದೆ. ಅದರಲ್ಲಿ ಸೇಲ್ಸ್ ಇಂಜಿನಿಯರ್ ಬೇಕು ಎಂದಿತ್ತು. ಎನ್ನಾರ್ ಕಾಲೋನಿಯ ಒಂದು ಮನೆಗೆ ಹೋದೆ. ಎದುರು ಮನೆಯಲ್ಲಿ ಕನ್ನಡ ಚಿತ್ರನಟ ದ್ವಾರಕೀಶ್ ಇದ್ದರು! ನನ್ನನ್ನು ಚೆನ್ನಾಗಿ ಮಾತಾಡಿಸಿದ ನನ್ನ ಭಾವೀ ಬಾಸ್ ನನಗೆ ಕೆಲಸ ಕೊಟ್ಟರು. ತಿಂಗಳಿಗೆ ಮುನ್ನೂರು ರೂಪಾಯಿ ಸಂಬಳ. ನನ್ನ ಕೆಲಸ ಗ್ರಾಹಕರ ಭೇಟಿ. ಸೇಲ್ಸ್ ಇಂಜಿನಿಯರ್ ಕೆಲಸವೇ ಅದಲ್ಲವೇ! ಆದರೆ ನನಗೆ ಕೆಲಸ ಎಂದರೇನೇ ಹೊಸತು. ನನ್ನ ಗ್ರಾಹಕರಿಗೆ ನೀಡಬೇಕಾಗಿದ್ದ ಕಂಪೆನಿಯ ಪರಿಚಯ ಪತ್ರಗಳನ್ನು ನಾನೇ ಟೈಪ್‍ರೈಟರ್‍ನಲ್ಲಿ ಟೈಪ್ ಮಾಡಿಕೊಂಡು ಒಯ್ಯಬೇಕಿತ್ತು. ಆ ಕಂಪೆನಿಯ ಮುಖ್ಯ ವೆಂಡರ್‍ಗಳು ಭಾರತದ ಮೂಲೆಮೂಲೆಗಳಲ್ಲಿದ್ದರು. ದಕ್ಷಿಣ ಭಾರತದಲ್ಲಿ ಆ ಉತ್ಪನ್ನಗಳನ್ನು ಮಾರಬೇಕಿತ್ತು. ನನಗೆ ಸ್ವಲ್ಪ ಬೇಗನೆ ಭೇಟಿಯ ಸಮಯ ಸಿಗುತ್ತಿತ್ತು. ಏಕೆಂದರೆ ನಾನು ‘ನಾನು ಕಲ್ಕತ್ತಾದ ... ಇಂಡಸ್ಟ್ರೀಸ್‍ನಿಂದ ಬಂದಿದ್ದೇನೆ’ ಎನ್ನುತ್ತಿದ್ದೆ. ಇಲ್ಲಿನ ಪ್ರತಿನಿಧಿ ಎಂದು ಹೇಳುತ್ತಿರಲಿಲ್ಲ! ಮೊಟ್ಟಮೊದಲ ಬಾರಿಗೆ ನೆಂಟರು, ಮನೆಯ ಸುತ್ತಲಿನವರು ಮತ್ತು ಮೇಷ್ಟರುಗಳನ್ನು ಬಿಟ್ಟು ಹೊಸ ಜನರನ್ನು ಭೇಟಿಯಾಗುವ ಅವಕ...

-7-

7-1-2018 ಜೀವನ ಖಂಡಗಳು ಬದುಕೊಂದು ಬಂಡಿ, ಓ ಪ್ರಯಾಣಿಕ! ಆದರೆ ನಮಗೆ ಬೇಕಾದಂತೆ ಒಂದಿಷ್ಟು ತಿರುಗಿಸಿಕೊಳ್ಳಲು ಪ್ರಯತ್ನವನ್ನಂತೂ ಮಾಡುವುದಕ್ಕೆ ಅಡ್ಡಿಯಿಲ್ಲ. ಜುಲೈ 1989 ನನ್ನ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರಲು ಆರಂಭ ಮಾಡಿತ್ತು ನಿಯತಿ. ನನ್ನ ಇಡೀ ವೃತ್ತಿ ಜೀವನವನ್ನು ಅಲ್ಲಿಯೇ ಕಳೆಯಬೇಕೆಂದುಕೊಂಡಿದ್ದ ನನಗೆ ವರ್ಗವಾಗಿತ್ತು. ಕಾರ್ಖಾನೆಯ ಒಳಗಿನ ಮತ್ತು ಹೊರಗಿನ ಜನರ ನಡುವಣ ಸೇತುವೆಯಾಗಿ ಜನರೇಟರ್ ಮಾರುತ್ತಿದ್ದವನನ್ನು ಇದ್ದಕ್ಕಿದ್ದಂತೆ ಮೋಟರ್ ವಿನ್ಯಾಸ ಮಾಡಲು ಸ್ಥಳಾಂತರಿಸಿದರು. ಹೊಸ ಕೆಲಸ, ಆದರೆ ಹೊಸ ಜನವಲ್ಲ. ಏಕೆಂದರೆ ನನಗೆ ಇಡೀ ಕಾರ್ಖಾನೆಯ ಮುಕ್ಕಾಲಂಶ ಜನರ ಪರಿಚಯವಿತ್ತು. ಯಾವುದೋ ಒಂದು ವಿಷಯದಲ್ಲಿ ಎಲ್ಲರೊಂದಿಗೂ ಸಂಪರ್ಕ ಏರ್ಪಟ್ಟಿತ್ತು. ಕೆಲಸ ಕಲಿಸಲು ನನಗೆ ಮೂವರು ಬಾಸ್‍ಗಳು. ಇದೂ ಒಂದು ಹೊಸ ಅನುಭವ. ಬಾಸ್ ಎಂದರೆ ನನಗೆ ನೆನಪಾಗುವುದು ನನ್ನ ಇಬ್ಬರು ಬಾಸ್‍ಗಳು. ಒಂದು ಕಾಲದಲ್ಲಿ ಬೇರಾವುದೋ ಶಾಖೆಯಲ್ಲಿದ್ದರು. ಆಗ ನನ್ನ ಮಾಮೂಲೀ ಶೈಲಿಯಲ್ಲಿ ಅವರನ್ನು ದಬಾಯಿಸಿದ್ದೆ. ನನ್ನ ಹೆಸರು ಅವರಿಗೆ ಗೊತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಒಬ್ಬ ಹೊಸ ಉದ್ಯೋಗಿ ಒಂದು ಕೆಲಸಕ್ಕೆ ಸೇರಿದನಂತೆ. ಯಾವುದೋ ನಂಬರ್ ಡಯಲ್ ಮಾಡಿ, ‘ಕಾಫಿ ತಗೊಂಬಾ’ ಎಂದನಂತೆ ಕ್ಯಾಂಟೀನ್ ಎಂದುಕೊಂಡು. ಆ ಕಡೆಯಿಂದ ಒಂದು ಸಿಟ್ಟಿನ ಧ್ವನಿ ‘ನಾನ್ಯಾರು ಗೊತ್ತಾ?’ ಎಂದಿತು. ‘ಗೊತ್ತಿಲ್ಲ’ ಎಂದ. ‘ನಾನೀ ಕಂಪೆನಿ ಬಾಸ್’ ಎಂದ ಅವನು ಹೂಂಕ...
-6- 6-1-2018 ಕೆಲವು ವಿಷಯಗಳು ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಬಿಡುತ್ತವೆ. ಕೆಲವು ನೆನಪಿಗೆ ಬರವು. ಮತ್ತೆ ಕೆಲವು ನಮಗೇ ನೆನೆಯಲಿಕ್ಕೆ ಇಷ್ಟವಿಲ್ಲದವು. ನಮ್ಮ ತಂದೆಯವರು ಅಶೋಕಪುರಂ ಸ್ಟೇಷನ್‍ನ ರೈಲ್ವೇ ವರ್ಕ್‍ಷಾಪ್‍ನಲ್ಲಿ ಎಲೆಕ್ಟ್ರಿಕಲ್ ಛಾರ್ಜ್‍ಮನ್ ಆಗಿದ್ದರು. ಅವರ ತಂದೆ ಕೂಡ ರೈಲ್ವೇಯಲ್ಲಿ ಕ್ಯಾರೇಜ್ ಆಂಡ್ ವ್ಯಾಗನ್ ಇನ್ಸ್‍ಪೆಕ್ಟರ್ ಆಗಿದ್ದರಂತೆ. ಅಂತೆ ಯಾಕೆಂದರೆ ನಾನು ಹುಟ್ಟುವೆ ಎಂಬ ವಿಷಯ ಕೇಳಿದ ಕೆಲವೇ ದಿನಗಳಲ್ಲಿ ಅವರು ತೀರಿಕೊಂಡರು. ಬಹುಶಃ ಅವರು 1956ರ ಕೊನೆಯಲ್ಲಿ ಭೂಮಿಯನ್ನು ಬಿಟ್ಟು ಹೋದರು. ನಾನು 1957ರ ಆಗಸ್ಟ್‍ನಲ್ಲಿ ಈ ಭೂಮಿಗೆ ಬಂದೆ. ಇದಕ್ಕೇ ಏನೋ ನನ್ನನ್ನು ನನ್ನ ತಾತನ ಅಪರಾವತಾರ ಎನ್ನುತ್ತಿದ್ದರು. ಅವರು ರಾಮಾನುಜಂ. ನಾನು ಯತಿರಾಜ. ನನ್ನ ಜನ್ಮನಾಮವೂ ರಾಮಾನುಜ ಎಂದೇ ಇತ್ತು. ರಾಮಾನುಜಾಚಾರ್ಯರನ್ನು ಯತಿರಾಜ ಎನ್ನುತ್ತಿದ್ದರು. ಅದಕ್ಕೇ ನಾನೂ ಯತಿರಾಜ ಆದೆ. ಆಗಿನ ಕಾಲಕ್ಕೆ ಅಪರೂಪದ ಹೆಸರು. ಈಗ ಬಹಳ ಜನ ಇದ್ದಾರೆ. ಚೆನ್ನೈಯಲ್ಲಿ ಯತಿರಾಜ್ ಕಾಲೇಜ್ ಎನ್ನುವ ಶಿಕ್ಷಣ ಸಂಸ್ಥೆ ಇದೆ. ಮನೆಯಲ್ಲಿ ಪುಟ್ಟರಾಜ ಮೊದಮೊದಲು. ಏಕೆಂದರೆ ನನ್ನ ಸೋದರತ್ತೆಯ ಮಗ ರಾಜಸಿಂಹ ದೊಡ್ಡರಾಜ (ಪೆರಿ ರಾಜ). ಬರ್ತಾ ಬರ್ತಾ ಮನೆಯಲ್ಲಿ ರಾಜು ಆದೆ. ಸ್ಕೂಲಿನಲ್ಲಿ ಯತಿರಾಜ್ ಇದ್ದಿದ್ದು ಕ್ರಮೇಣ ಯತಿ ಆಯಿತು. ಈಗ ಸಾಹಿತ್ಯಕ್ಷೇತ್ರದಲ್ಲಿ ವೀರಾಂಬುಧಿ ಎನ್ನುವ ಹೆಸರು ಬಂದಿದೆ. ನನ್ನ ಹಿಂದಿನವರು ದೊಡ್ಡ ವೀರರಾಗಿದ್ದರಂತೆ....
-5- 5-1-2018 ನನಗೆ ನೆನಪಿರುವ ಮಟ್ಟಿಗೆ ನಾನು ನೋಡಿ ಅರ್ಥ ಮಾಡಿಕೊಂಡ ಮೊದಲ ಸಿನಿಮಾ ಮಂತ್ರಾಲಯ ಮಹಾತ್ಮೆ. ಅಣ್ಣಾವ್ರ ರಾಘವೇಂದ್ರ ಸ್ವಾಮಿ ಪಾತ್ರ ಇಂದಿಗೂ ಕಣ್ಣಿಗೆ ಕಟ್ಟಿದಂತೆ ಇದೆ. ನನಗಾಗ ಒಂಬತ್ತು ವರ್ಷ. ನನ್ನ ತಂದೆಯವರ ತಂಗಿ ಬೆಂಗಳೂರು ಮಹಾರಾಣಿ ಕಾಲೇಜಿನಿಂದ ಮೈಸೂರು ಮಹಾರಾಣಿ ಕಾಲೇಜಿಗೆ ವರ್ಗವಾಗಿ ಬಂದರು. ಅವರೊಂದಿಗೆ ಅವರ ಮೂರು ವರ್ಷಗಳ ಮುದ್ದಿನ ಮಗ ಇದ್ದ. ನನಗೂ, ನನ್ನ ತಂಗಿಗೂ ಅವನೊಂದು ಜೀವಂತ ಗೊಂಬೆ ಆಗ. ಈಗ ಅವನು ನಮ್ಮ ಸರಿಸಮನಾಗಿ ಮಾತಾಡುತ್ತಾ ಇರುವ ಒಬ್ಬ ವೈದ್ಯ. ನಮ್ಮ ಸೋದರತ್ತೆ ನನ್ನನ್ನು ಸಿನಿಮಾಗೆ ಕರೆದೊಯ್ಯುವರೆಂಬ ಥ್ರಿಲ್ ಆಗ. ಪ್ರಭುದೇವ (ಪದ್ಮ) ಟಾಕೀಸಿಗೆ ಹೋದೆವು. ಅದಕ್ಕೆ ಮುಂಚೆ ನೋಡಿದ ಸಿನಿಮಾಗಳಲ್ಲಿ ‘ತೆರೆ ಘರ್‍ಕೆ ಸಾಮನೇ’ ಸಿನಿಮಾ ಮತ್ತು ಅದರ ಇನ್ನೊಂದು ಹಾಡು ‘ತೂ ಕಹಾಂ ಎ ಬತಾ ಇಸ್ ನಶೀಲೀ ರಾತ್‍ಮೆ’ ನೆನಪಿದೆ. ಹಾಡಿನ ತುಣುಕುಗಳು ಮಾತ್ರ ಎಂದಿಟ್ಟುಕೊಳ್ಳಿ. ಹ್ಞಾಂ... ಪದ್ಮ ಟಾಕೀಸ್ ಮುಂದೆ ರಾಘವೇಂದ್ರ ಸ್ವಾಮಿಗಳ ಕಟೌಟ್ ಮತ್ತು ಹುಂಡಿ ಇಟ್ಟಿದ್ದರು ಎಂದು ನೆನಪು. ಸಿನಿಮಾದಲ್ಲಿ ಗಂಧ ಅರೆಯುವ ವೆಂಕಟನಾಥ, ಪಕ್ಕದ ಮನೆಯ ಕಲ್ಪನಾ ಜಯಂತಿಯೊಂದಿಗೆ ಹಾಡುವ ಹಾಡು ಆಭರಣದ ಅಲಂಕಾರ ಏನೂ ಇಲ್ಲದೆಯೇ ತಾ... ಜಯಂತಿ ದೆವ್ವವಾಗಿ ಬಾವಿಯಿಂದ ಎದ್ದು ಬರುವುದು... ಮತ್ತೊಮ್ಮೆ ಈ ಸಿನಿಮಾವನ್ನು ನೋಡಿದ ನೆನಪಿಲ್ಲ ನನಗೆ. ಅಣ್ಣಾವ್ರ ಅನೇಕ ಸಿನಿಮಾಗಳನ್ನು ಅನೇಕಾನೇಕ ಬಾರಿ ನೋಡಿರುವ ಹೆಗ್ಗಳಿಕೆ ನನ್ನ...

ಅವಳೊಂದು ಧಾರಾವಾಹಿ

4 4.1.2018 ಸಾವಿರದ ಒಂಬೈನೂರ ಎಪ್ಪತ್ತೈದರ ಮೊದಲ ಭಾಗ. ನನ್ನ ಸೋದರತ್ತೆಯ ಮಗ ರಾಜಸಿಂಹ ನಮ್ಮ ಮನೆಗೆ ಬಂದ. ಅವನು ಒಬ್ಬ ಸಿವಿಲ್ ಇಂಜಿನಿಯರ್. ಅದ್ಭುತವಾಗಿ ಫೋಟೋ ತೆಗೆಯಬಲ್ಲ. ಜರ್ಮನ್ ಕ್ಯಾಮೆರಾ ವ್ಹೈಸ್‍ಲ್ಯಾಂಡರ್ ಇತ್ತು ಅವನ ಬಳಿ. ಅವನು ಬಂದಿದ್ದು ಮೈಸೂರು ಚಾಮರಾಜ ಜೋಡಿ ರಸ್ತೆಯ ಲಕ್ಷ್ಮಿ ಚಿತ್ರಮಂದಿರದ ಪರದೆಯನ್ನು ನವೀಕರಿಸಲು. ಅವನು ಬಂದಿದ್ದು ನಮಗೊಂದು ಹೊಸಗಾಳಿಯ ಅಲೆ ಬಂದಂತೆ ಆಗಿತ್ತು. ಏಕೆಂದರೆ ಅವನಿಂದ ನಾನು ಅನೇಕ ಹೊಸ ವಿಷಯಗಳನ್ನು ಕಲಿತೆ. ಆಸ್ಟರಿಕ್ಸ್ ಎನ್ನುವ ಕಾಮಿಕ್ಸ್ ಪುಸ್ತಕಗಳನ್ನು ನನಗೆ ಅವನು ಪರಿಚಯಿಸಿದ. ಈಗಲೂ ಅದು ನನ್ನ ಬಲು ಇಷ್ಟದ ಕಾಮಿಕ್ಸ್. ಟಿನ್‍ಟಿನ್ ಕೂಡ ಆಗಲೇ ಓದಿದ್ದರೂ ನನ್ನ ಒಲವು ಆಸ್ಟರಿಕ್ಸ್ ಕಡೆಗೆ. ಒಂದು ರೀತಿಯ ಸಟಲ್ ಹ್ಯೂಮರ್ ಇರುವುದು ಆ ಕಾಮಿಕ್ ಪುಸ್ತಕಗಳಲ್ಲಿ. ಲಕ್ಷ್ಮಿ ಟಾಕೀಸ್‍ನಲ್ಲಿ ಹಿಂದಿನ ಪರದೆಯನ್ನು ನವೀನಗೊಳಿಸುವಾಗ ಸಿನಿಮಾ ನಿಲ್ಲಬಾರದಲ್ಲ! ಅದಕ್ಕೇ ಮೂಲ ಪರದೆಯ ಮುಂದೆ ಒಂದು ತಾತ್ಕಾಲಿಕ ಪರದೆಯನ್ನು ನಿಲ್ಲಿಸಿದರು. ಆ ಸಮಯದಲ್ಲಿ ಬಂದ ಅನೇಕ ಸಿನಿಮಾಗಳಿಗೆ ನನ್ನ ಅಮ್ಮನನ್ನು ಕರೆದೊಯ್ದಿದ್ದ ರಾಜಣ್ಣ. ಅವನನ್ನು ನಾವು ರಾಜಣ್ಣ ಎಂದೇ ಕರೆಯುತ್ತಿದ್ದುದು. ಅವನು ದೊಡ್ಡ ರಾಜ ನಾನು ಪುಟ್ಟರಾಜ. ಬಹಳ ವರ್ಷ ನನ್ನನ್ನು ಎಲ್ಲರೂ ಪುಟ್ರಾಜೂ ಎಂದೇ ಕರೆಯುತ್ತಿದ್ದುದು ನೆನಪಿದೆ. ಯಾವ ನೆಂಟರು ಮನೆಗೆ ಬಂದರೂ, ‘ಯಾವತ್ತು ಹೋಗ್ತೀರಿ?’ ಎಂದು ಕೇಳಿ ಅಮ್ಮನಿಂದ ಬೈಸಿಕೊಳ್ತಿದ್ದೆ...
3-1-2018 ಅವನ ಗುರುವಿನ ಸಪ್ಪಳ! ಅನಂತಶಯನ ನನ್ನ ಹೈಸ್ಕೂಲು ಸಹಪಾಠಿ. ಅವನ ಮನೆ ಕುವೆಂಪು ಅವರ ಮನೆಯ ಹಿಂದಿನದು. ಮಹಾಜನ ಹೈಸ್ಕೂಲಿನಲ್ಲಿ ಎಂಟನೇ ತರಗತಿ ಸೇರಿದಾಗ ಗೆಳೆಯನಾದ. ಅವನ ಅಣ್ಣಂದಿರಲ್ಲಿ ಒಬ್ಬರು ಜನರ ಡಾಕ್ಟರು. ಒಬ್ಬರು ದನದ ಡಾಕ್ಟರು. ನೀನ್ಯಾವ ಡಾಕ್ಟರಾಗ್ತೀ ಅಂತ ರೇಗಿಸ್ತಿದ್ವಿ. ಬಹಳ ಬುದ್ಧಿವಂತ. ಕೆಲವೊಮ್ಮೆ ಅದ್ಭುತವಾದ ಒನ್‍ಲೈನರ್ಸ್ ಅವನಿಂದ ಹೊರಹೊಮ್ಮುತ್ತಿದ್ದವು. ಹೈಸ್ಕೂಲು ಮುಗಿಸಿ ನಾನು ಬೆಂಗಳೂರಿಗೆ ಬಂದು ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಪಿ.ಯು.ಸಿ. ಓದಿದೆ. ಡಾ. ಎಚ್ ಎಸ್ ರಾಘವೇಂದ್ರರಾವ್ ನಮ್ಮ ಕನ್ನಡ ಮೇಷ್ಟರು ಆಗ. ಮುಂದೊಮ್ಮೆ ನಾನು ಕಾದಂಬರಿಗಳನ್ನು ಬರೆಯುವೆ ಅಂತ, ಅವರಿಂದ ನನ್ನ ಮ್ಯಾಗ್ನಂ ಓಪಸ್ ಚಿರಸ್ಮಿತಗೆ ಮುನ್ನುಡಿ ಬರೆಸುವೆ ಅಂತ ಕನಸು ಕೂಡ ಕಂಡಿರಲಿಲ್ಲ! ಪಿ.ಯು.ಸಿ. ಮುಗಿಸಿದಾಗ ಒಂದು ಅನಿಶ್ಚಯ ಸ್ಥಿತಿ ಉಂಟಾಗಿ ನಾನು ಮತ್ತೆ ಮೈಸೂರಿಗೆ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸೇರಬೇಕಾಯಿತು. ಆಗ ನನ್ನ ಸಹಪಾಠಿ ಅನಂತಶಯನ ಎಂದು ತಿಳಿದು ಖುಷಿ ಆಯಿತು. ನಮ್ಮ ಮನೆ ರೈಲ್ವೇ ಲೋಕೋ ಕಾಲೋನಿಯಲ್ಲಿತ್ತು. ಅಲ್ಲಿಗೆ ಅವನು ತನ್ನ ಸೈಕಲ್‍ನಲ್ಲಿ ಬರುತ್ತಿದ್ದ. ಇಬ್ಬರೂ ಕಂಬೈಂಡ್ ಸ್ಟಡೀ ಮಾಡ್ತಿದ್ದೆವು. ರಾತ್ರಿ ಹನ್ನೆರಡು ಗಂಟೆಗೆ ರೈಲ್ವೇ ಕಂಬಿಗಳನ್ನು ದಾಟಿಕೊಂಡು, ಮೂರು ಫರ್ಲಾಂಗ್ ದೂರದಲ್ಲಿದ್ದ ರೈಲು ನಿಲ್ದಾಣದಲ್ಲಿ ಟೀ ಕುಡಿಯುತ್ತಿದ್ದೆವು. ಮೂರನೆಯ ವರ್ಷ ಇಂಜಿನಿಯರಿಂಗ್‍ನಲ್ಲಿ...
-2- 2-1-2018 ಮೈಸೂರು ಮಹಾಜನ ಪ್ರೌಢಶಾಲೆಯಲ್ಲಿ ನಾನು ಎಂಟನೇ ತರಗತಿ ಸೇರಿದೆ. ಅದು 1969 ಜೂನ್ ತಿಂಗಳು. ಕಿವಿ ಕೇಳಿಸದ ಶ್ರೀ ಎಸ್.ಎಸ್.ಆರ್. ಅವರ ತರಗತಿಯಲ್ಲಿ ಕಪ್ಪೆ ರಮೇಶ ಜೋರಾಗಿ ಕೂಗುತ್ತಿದ್ದ. ನಮಗೆಲ್ಲಾ ನಗು. ಆ ಕೂಗು ಎಸ್ಸೆಸ್ಸಾರ್ ಕಿವಿಗೆ ತಲುಪುತ್ತಿರಲಿಲ್ಲ. ಆಗೆಲ್ಲಾ ಇಂಕ್ ಪೆನ್ ಅಥವಾ ಫೌಂಟನ್ ಪೆನ್ ಬಳಸುತ್ತಿದ್ದೆವು. ಒಮ್ಮೆ ಸುರೇಶ ತನ್ನ ಪೆನ್ನಿನ ಕ್ಯಾಪ್‍ನಲ್ಲಿ ಉಫ್ ಎಂದು ಊದಿದ. ಅದು ಸಿಳ್ಳೆಯಂತೆ ಎಸ್ಸೆಸ್ಸಾರ್‍ಗೆ ಕೇಳಿಸಿಬಿಟ್ಟಿತು. ನಾನಲ್ಲ ಸರ್, ನಾವಲ್ಲ ಸರ್ ಕೇಳಿ ಕೇಳಿ ಮುಂದಿನ ಬೆಂಚಿನಲ್ಲಿದ್ದ ನಮ್ಮನ್ನು ಹೊರಗಟ್ಟಿದರು ಮೇಷ್ಟರು. ನಂತರ ಅವರ ಮಗ ಎಸ್ಸಾರ್ಕೆ ವಿಜ್ಞಾನ ಪಾಠ ಮಾಡಲು ಬಂದಾಗ ನಾವು ಗುಜುಗುಜು ಮಾಡಿದರೆ, ಅವರ ಎಡಗೈಯಲ್ಲಿನ ಚಾಕ್‍ಪೀಸ್‍ನ ಒಂದು ಪೀಸ್ ಮುರಿದು ನಮ್ಮ ಮೇಲೆ ಗುರಿಯಿಟ್ಟು ಎಸೆಯುತ್ತಿದ್ದರು. ಒಮ್ಮೆ ಯಾರೋ ಜೀನಿಯಸ್ ಸಹಪಾಠಿ ಆಗ ಬರುತ್ತಿದ್ದ ಉದ್ದನೆಯ ಚೂಯಿಂಗ್‍ಗಮ್ ಬಟರ್ ಪೇಪರ್ ತಂದು ಅದನ್ನು ಮಡಿಚಿ, ರಬ್ಬರ್‍ಬ್ಯಾಂಡನ್ನು ಬಿಲ್ಲಿನಂತೆಯೂ, ಈ ಕಾಗದವನ್ನು ಬಾಣದಂತೆಯೂ ಬಳಸಿ, ಅವರು ಆ ಕಡೆ ತಿರುಗಿ ಬೋರ್ಡಿನ ಮೇಲೆ ಬರೆಯುತ್ತಿದ್ದಾಗ ಸುಂಯ್ ಎಂದು ಅವರಿಗೆ ಹೊಡೆದಿದ್ದ. ಇದೊಂದು ಆಟವಾಗಿಹೋಯಿತು ಹುಡುಗರಿಗೆ. ಪ್ರತಿಯೊಬ್ಬರನ್ನೂ ಚೆಕ್ ಮಾಡಲಾರಂಭಿಸಿದಾಗ, ನಿಕ್ಕರ್ ಅಥವಾ ಪ್ಯಾಂಟ್ (ತೀರಾ ಉದ್ದ ಬೆಳೆದಿದ್ದವರು ಪ್ಯಾಂಟ್, ಗಿಡ್ಡವಾಗಿದ್ದವರು ನಿಕ್ಕರ್ ಧರಿಸುತ್ತಿದ್ದೆವು) ಮುಂದ...