-6-
6-1-2018
ಕೆಲವು ವಿಷಯಗಳು ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಬಿಡುತ್ತವೆ. ಕೆಲವು ನೆನಪಿಗೆ ಬರವು. ಮತ್ತೆ ಕೆಲವು ನಮಗೇ ನೆನೆಯಲಿಕ್ಕೆ ಇಷ್ಟವಿಲ್ಲದವು.
ನಮ್ಮ ತಂದೆಯವರು ಅಶೋಕಪುರಂ ಸ್ಟೇಷನ್‍ನ ರೈಲ್ವೇ ವರ್ಕ್‍ಷಾಪ್‍ನಲ್ಲಿ ಎಲೆಕ್ಟ್ರಿಕಲ್ ಛಾರ್ಜ್‍ಮನ್ ಆಗಿದ್ದರು. ಅವರ ತಂದೆ ಕೂಡ ರೈಲ್ವೇಯಲ್ಲಿ ಕ್ಯಾರೇಜ್ ಆಂಡ್ ವ್ಯಾಗನ್ ಇನ್ಸ್‍ಪೆಕ್ಟರ್ ಆಗಿದ್ದರಂತೆ. ಅಂತೆ ಯಾಕೆಂದರೆ ನಾನು ಹುಟ್ಟುವೆ ಎಂಬ ವಿಷಯ ಕೇಳಿದ ಕೆಲವೇ ದಿನಗಳಲ್ಲಿ ಅವರು ತೀರಿಕೊಂಡರು. ಬಹುಶಃ ಅವರು 1956ರ ಕೊನೆಯಲ್ಲಿ ಭೂಮಿಯನ್ನು ಬಿಟ್ಟು ಹೋದರು. ನಾನು 1957ರ ಆಗಸ್ಟ್‍ನಲ್ಲಿ ಈ ಭೂಮಿಗೆ ಬಂದೆ.
ಇದಕ್ಕೇ ಏನೋ ನನ್ನನ್ನು ನನ್ನ ತಾತನ ಅಪರಾವತಾರ ಎನ್ನುತ್ತಿದ್ದರು. ಅವರು ರಾಮಾನುಜಂ. ನಾನು ಯತಿರಾಜ. ನನ್ನ ಜನ್ಮನಾಮವೂ ರಾಮಾನುಜ ಎಂದೇ ಇತ್ತು. ರಾಮಾನುಜಾಚಾರ್ಯರನ್ನು ಯತಿರಾಜ ಎನ್ನುತ್ತಿದ್ದರು. ಅದಕ್ಕೇ ನಾನೂ ಯತಿರಾಜ ಆದೆ. ಆಗಿನ ಕಾಲಕ್ಕೆ ಅಪರೂಪದ ಹೆಸರು. ಈಗ ಬಹಳ ಜನ ಇದ್ದಾರೆ. ಚೆನ್ನೈಯಲ್ಲಿ ಯತಿರಾಜ್ ಕಾಲೇಜ್ ಎನ್ನುವ ಶಿಕ್ಷಣ ಸಂಸ್ಥೆ ಇದೆ.
ಮನೆಯಲ್ಲಿ ಪುಟ್ಟರಾಜ ಮೊದಮೊದಲು. ಏಕೆಂದರೆ ನನ್ನ ಸೋದರತ್ತೆಯ ಮಗ ರಾಜಸಿಂಹ ದೊಡ್ಡರಾಜ (ಪೆರಿ ರಾಜ). ಬರ್ತಾ ಬರ್ತಾ ಮನೆಯಲ್ಲಿ ರಾಜು ಆದೆ. ಸ್ಕೂಲಿನಲ್ಲಿ ಯತಿರಾಜ್ ಇದ್ದಿದ್ದು ಕ್ರಮೇಣ ಯತಿ ಆಯಿತು. ಈಗ ಸಾಹಿತ್ಯಕ್ಷೇತ್ರದಲ್ಲಿ ವೀರಾಂಬುಧಿ ಎನ್ನುವ ಹೆಸರು ಬಂದಿದೆ.
ನನ್ನ ಹಿಂದಿನವರು ದೊಡ್ಡ ವೀರರಾಗಿದ್ದರಂತೆ. ಮೈಸೂರು ಮಹಾರಾಜರೊಬ್ಬರು ನನ್ನ ಹಿಂದಿನ ತಲೆಮಾರಿನವರಿಗೆ ‘ಸಮುದ್ರದಷ್ಟು ವೀರ’ ಎನ್ನುವ ಬಿರುದು ಕೊಟ್ಟಿದ್ದರಿಂದ ನಮ್ಮ ಕುಟುಂಬವು ವೀರಾಂಬುಧಿ ಕುಟುಂಬ ಎನ್ನುವ ಹೆಸರನ್ನು ಪಡೆಯಿತು.
ಕನ್ನಡಪ್ರಭದಲ್ಲಿ ನನ್ನ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಧಾರಾವಾಹಿ ಆಗುವ ಮುನ್ನಾ ದಿನ, ಆಗ ಕನ್ನಡಪ್ರಭದಲ್ಲಿ ನನಗೆ ಬರೆಯಲು ಅವಕಾಶವಿತ್ತಿದ್ದ ದಿವಂಗತ ಶ್ರೀ ರಮಾಕಾಂತ್ ನನ್ನನ್ನು ಆಗಿನ ಸಂಪಾದಕರಾದ ಶ್ರೀ ವೈಎನ್‍ಕೆ ಅವರ ಬಳಿಗೆ ಕರೆದೊಯ್ದು ‘ಯತಿರಾಜ್ ವೀರಾಂಬುಧಿ ಅಂತ. ಇವರ ಮೊದಲ ಕಾದಂಬರಿ ನಾಳೆಯಿಂದ ಧಾರಾವಾಹಿ ಆಗ್ತಿದೆ’ ಎಂದಿದ್ದರು. ಆಗ ವೈಎನ್‍ಕೆ, ‘ಈ ವೀರಾಂಬುಧಿ ಎಂದರೆ...’ ಎಂದು ನಿಲ್ಲಿಸಿದಾಗ, ‘ಧರ್ಮಾಂಬುಧಿ, ಕೆಂಪಾಂಬುಧಿ ಥರ ಕೆರೆ ಅಲ್ಲ ಸರ್...’ ಎಂದು ನನ್ನ ಹಿಂದಿನವರ ಕಥೆ ಹೇಳಿದ್ದೆ.
ನನ್ನ ಮಾರ್ಗದರ್ಶಿಯೊಬ್ಬರು ‘ನೀವು ಕ್ಷತ್ರಿಯರಿದ್ದಿರಬೇಕು. ರಾಮಾನುಜರ ಕಾಲದಲ್ಲಿ ಶ್ರೀವೈಷ್ಣವ ದೀಕ್ಷೆ ಪಡೆದಿರಬೇಕು’ ಎಂದರು. ನಮ್ಮ ಊರು ಮೇಲ್ಕೋಟೆ. ಅದಕ್ಕೇ ನನ್ನ ಹೆಸರಲ್ಲಿ ಮಂಡ್ಯ ಇದೆ. ಎಂ.ವಿ. ಯತಿರಾಜ್.
ಇತ್ತೀಚೆಗೆ ಗೂಗಲಾಚಾರ್ಯನನ್ನು ಭೇಟಿ ಮಾಡಿ, ‘ವೀರಾಂಬುಧಿ’ ಎಂದು ಬರೆದಾಗ, ಮೇಲ್ಕೋಟೆ ಕೆಳಗಿನ ತೊಣ್ಣೂರು ಕೆರೆಯ ಬಳಿ ಇರುವ ‘ವೀರಾಂಬುಧಿ’ ಕೆರೆಯ ಹತ್ತಿರ ವಾಸ ಮಾಡುತ್ತಿದ್ದುದರಿಂದ ನಮ್ಮ ಕುಟುಂಬಕ್ಕೆ ವೀರಾಂಬುಧಿ ಎಂದು ಹೆಸರು ಬಂದಿರಬೇಕು ಎಂದಿದೆ.
ಇರಬಹುದು. ನಾವು ಸಮುದ್ರದಷ್ಟು ವೀರರೆಂದು ನಮಗೆ ಕೆರೆಯನ್ನೂ, ಅದರ ಸುತ್ತಲಿನ ಹಳ್ಳಿಯನ್ನೂ ಜಹಗೀರಾಗಿ ಕೊಟ್ಟು ಆ ಕೆರೆಗೆ ವೀರಾಂಬುಧಿ ಎಂದು ಹೆಸರಿಟ್ಟಿರಬಹುದು ಎಂದು ಹೇಳಿಕೊಂಡೆ!


Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102