ಯತಿ ಸ್ವಂತೀ -270


29-09-2018
ಸುಮಾರು 13 ವರ್ಷಗಳು ಆದವು ನಾನು ವಾಪಸ್ ಬೆಂಗಳೂರಿಗೆ ಬಂದು. ನಿಧಾನವಾಗಿ ಅಲ್ಲಿನ ಸಂಗತಿಗಳು ಮರೆತು ಹೋಗುತ್ತಿದೆ. ಅಮ್ಮ ಮಸ್ಕತ್‌ಗೆ ಬಂದ ವಿಷಯಕ್ಕೆ ಬರ್ತೀನಿ. ಅವರು ಬರುವ ಮುಂಚೆಯೇ ನಾನು ಮನೆ ಬದಲಾಯಿಸಿದ್ದೆ. ಅಷ್ಫಾಕ್, ರಾಜ್ ಶೆಟ್ಟಿ ಮತ್ತು ಶಂಸುದ್ದೀನ್ ನನ್ನ ಫ್ಲ್ಯಾಟ್ ಮೇಟುಗಳು. ಅವರಿಗೆ ಮೊದಲೇ ಹೇಳಿದ್ದೆ ಅಮ್ಮ ಬರುವರೆಂಬ ವಿಷಯ. ಅಮ್ಮ ಬರುವ ಮೊದಲೇ ನಾನು ಆ ರೂಮು ಸೇರಿದ್ದೆ. ಉಳಿದ ಮೂವರಿಗೆ ತೊಂದರೆ ಆಗಬಾರದೆಂದು ಬೆಳಗ್ಗೆ ನಾಲ್ಕೂವರೆಗೆ ಸ್ನಾನ ಮುಗಿಸಿ ಐದು ಗಂಟೆಗೆ ಕೃಷ್ಣನ ದೇವಸ್ಥಾನ ತಲುಪುತ್ತಿದ್ದೆ. ಟ್ರಾಫಿಕ್ ಸಿಗ್ನಲ್ ಒಂದು ವೈಶಿಷ್ಟ್ಯ ಹೊಂದಿತ್ತು. ನನ್ನ ಕಾರನ್ನು ಸೆನ್ಸ್ ಮಾಡಿ ಹಸಿರು ದೀಪವಾಗಿ ಬದಲಾವಣೆ ಆಗುತ್ತಿತ್ತು ಸಿಗ್ನಲ್. ಕೃಷ್ಣನ ಗುಡಿ ತೆರೆದೊಡನೆ ಒಳಗೆ ಹೋಗಿ ಕಾಳಿಂಗ ಮರ್ದನದ ಫೋಟೋ ಕೆಳಗೆ ಕೂತು ಆ ದೇಶದಲ್ಲಿ ಕೊಂಡಿದ್ದ ಗೀತೆ ಮತ್ತು ವೇದಾಂತದ ಪುಸ್ತಕ ಓದುತ್ತಿದ್ದೆ. ಮೂವರು ಓಲ್ಡ್ ಮೆನ್ ಹೊರಗೆ ನಿಂತು ಶ್ರೀ ವಿಷ್ಣು ಸಹಸ್ರ ನಾಮ ಪಠಿಸುತ್ತಿದ್ದರು. ಆಮೇಲೆ ಕೃಷ್ಣನಿಗೆ ಮಂಗಳಾರತಿ ಆಗುತ್ತಿತ್ತು. ಅದನ್ನು ಮುಗಿಸಿ ಹೊಟೇಲ್‌ಗೆ ಬಂದು ತಿಂಡಿ ತಿಂದು ಆಫೀಸಿಗೆ ಏಳು ಗಂಟೆ ಸುಮಾರಿಗೆ ಹೋಗುತ್ತಿದ್ದೆ. ಎಂಟಕ್ಕೆ ಆಫೀಸ್‌ ಶುರು. ಅಮ್ಮ ಬಂದರು. ಹೊಟೇಲ್ ಊಟ ತರಿಸ್ತೀನಿ ಅಂದೆ. ಬೇಡ ಬೋರ್ ಆಗತ್ತೆ ಅಡುಗೆ ಮಾಡ್ತೀನಿ ಅಂದರು. ಆ ಮನೆಯಲ್ಲಿದ್ದ ಉಳಿದವರು ಅಡುಗೆ ಮಾಡುತ್ತಿರಲಿಲ್ಲ. ಅವರು ಮೂವರೂ ಕೆಲಸಕ್ಕೆ ಹೊರಟ ಮೇಲೆ ಅಮ್ಮ ಸ್ನಾನ ಮುಗಿಸಿ ಅಡುಗೆ ಮಾಡುತ್ತಿದ್ದರು. ಅವರು ಕೇಳಿದ ತರಕಾರಿ ದಿನಸಿ ತರುತ್ತಿದ್ದೆ. ಬೆಳಗ್ಗೆ ತಿಂಡಿ ಮಾಡುತ್ತಿದ್ದರು. ತಿಂದು ಏಳು ಮುಕ್ಕಾಲು ಗಂಟೆಗೆ ಹೊರಡುತ್ತಿದ್ದೆ. ನನ್ನ ಆಫೀಸ್ ಕಾರಿನಲ್ಲಿ ಮೂರು ನಿಮಿಷಗಳ ದೂರ. ಅಲ್ಲಿ ಸುಮಾರು ಹತ್ತೂವರೆ ವರೆಗೆ ಪತ್ರ ವ್ಯವಹಾರ ಮುಗಿಸಿ ನಂತರ ನನ್ನ ಕಸ್ಟಮರುಗಳ ಭೇಟಿಗೆ ಹೋಗುತ್ತಿದ್ದೆ. ಅವರುಗಳೊಂದಿಗೆ ಸಾಕಷ್ಟು ಒಳ್ಳೆಯ ಗೆಳೆತನವಿತ್ತು. ಒಬ್ಬರು ಕಸ್ಟಮರ್ ಆಫೀಸಿನಲ್ಲಿ ನುಗ್ಗೇಕಾಯಿ ಮರವಿತ್ತು. ಕಾಯಿ ತರುತ್ತಿದ್ದೆ. ಅಲ್ಲಿನ ಸೂಪರ್ ಬಜಾರ್‌ಗಳಿಗೆ, ಮಾಲ್‌ಗಳಿಗೆ ಅಮ್ಮ ಬರಲು ನಿರಾಕರಿಸಿದರು. ಅವರಿಗೆ ನಡೆಯಲು ಕಷ್ಟ ಆಗುತ್ತಿತ್ತು. ಆದರೂ ನನ್ನ ಸಹೋದ್ಯೋಗಿಗಳು ಕೆಲವರ ಮನೆಗೆ ಊಟಕ್ಕೆ ಕರೆದೊಯ್ದೆ. ನಾನು ಕೆಲಸಕ್ಕೆ ಯಾರ ಜಾಗಕ್ಕೆ ಬಂದಿದ್ದೆನೋ ಆ ವ್ಯಕ್ತಿ ಜೋಷಿಯ ಮನೆಗೂ ಕರೆದೊಯ್ದಿದ್ದೆ. ಈ ಜೋಷಿ ಮುಂದೊಂದು ದಿನ ನನ್ನ ವೃತ್ತಿ ಜೀವನದಲ್ಲಿ ಹೊಸ ತಿರುವು ತರಲು ಕಾರಣವಾಗಿದ್ದ...

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102