ಯತಿ ಸ್ವಂತೀ -171
20-06-2018
ಎರಡನೇ ಪಿಯುಸಿ ಸಮಯದಲ್ಲಿ ಆರ್ ಎ ಫಣಿಶಾಯಿ ಪ್ರಿನ್ಸಿಪಾಲ್ ಆದರು. ಅವರು ಶ್ರೀ ರಾಳ್ಳಪಲ್ಲಿ ಅನಂತಕೃಷ್ಣ ಶರ್ಮ ಅವರ ಪುತ್ರ. ಆರ್ ಎ ಪಿ ಅವರು ವೀಣಾ ವಿದ್ವಾನ್ ಅಂತ ಕೇಳಿದ್ದೆ.
ಎರಡನೇ ವರ್ಷ ಮತ್ತೆ ಮ್ಯೂಸಿಕ್ ಸ್ಪರ್ಧೆ ಇತ್ತು. ಫೈನಲ್ ಯಿಯರ್ ನಿರುಪಮಾ ಅವರು ಶರ್ಮೀಲೀ ಚಿತ್ರದ ಮೇಘಾ ಛಾಯೇ ಆಧೀರಾತ್ ಬೈರನ್ ಬನ್ ಗಯೀ ನಿಂದಿಯಾ ಹಾಡಿ ಬಹುಮಾನ ಗೆದ್ದ ನೆನಪು..
ಪರೀಕ್ಷೆ ಬಂತು. ಸೀರಿಯಸ್ ಆಗಿ ಓದಿದೆ.
ಕನ್ನಡ ಪರೀಕ್ಷೆಯಲ್ಲಿ ವ್ಯಾಕರಣ ಇತ್ತು. ಚೆನ್ನಾಗಿ ಅಭ್ಯಾಸ ಮಾಡಿದೆ.
ಜೇಮ್ಸ್ ಹ್ಯಾಡ್ಲಿ ಛೇಸ್ ಇಡೀ ತೊಂಭತ್ತು ಪುಸ್ತಕಗಳನ್ನು ಓದಿ ಮುಗಿಸಿದೆ. ಅಬ್ಬಾ ಎಂತಹ ವೈವಿಧ್ಯ ಇದೆ ಈತನ ಕಾದಂಬರಿಗಳಲ್ಲಿ!
ಒಂದು ಉದಾಹರಣೆ. ವಿಕ್ ಡರ್ಮಾಟ್ ಒಬ್ಬ ಯಶಸ್ವೀ ಲೇಖಕ. ಒಂದು ಉಜ್ವಲ ಪ್ರಾತಃಕಾಲ ಊರಾಚೆಯ ಅವನ ಮನೆಯಲ್ಲಿ ಬೆಳಗ್ಗೆ ಏಳುತ್ತಾನೆ. ಹೆಂಡತಿ ಮಗಳು ತಂಗಿ ಎಲ್ಲ ನಿದ್ದೆ ಮಾಡುತ್ತಿರುತ್ತಾರೆ.
ಅವನ ನಾಯಿ ಕಾಣೆಯಾಗಿರುತ್ತದೆ. ಟೆಲಿಫೋನ್ ವೈರ್ ಕತ್ತರಿಸಲ್ಪಟ್ಟಿರುತ್ತದೆ. ಎಲ್ಲೋ ಒಂದೆಡೆ ಶೂ ಒದ್ದೆ ಆದಂತಾಗಿ ಕಾಲಿನ ಕಡೆಗೆ ನೋಡುತ್ತಾನೆ. ಬೆಚ್ಚಿ ಬೀಳುವಂತಾಗುತ್ತದೆ ಅವನಿಗೆ. ಅವನು ತನಗೇ ತಿಳಿಯದೇ ಒಂದು ರಕ್ತದ ಮಡುವಿನಲ್ಲಿ ಕಾಲಿಟ್ಟಿರುತ್ತಾನೆ.
ಇಷ್ಟು ಹೇಳಿದ ಛೇಸ್... ಕಥೆಯ ಹಿನ್ನೆಲೆಗೆ ಹೋಗುತ್ತಾನೆ. ಇಷ್ಟು ಸಾಕಲ್ಲವೇ ಓದುಗರನ್ನು ಕಥೆಯೊಳಗೆ ಸೆಳೆದು ಮುಳುಗಿಸಲು...
ಹೆಂಡತಿ ಅವಳ ತಾಯಿಗೆ ಆರೋಗ್ಯ ಸರಿಯಿಲ್ಲ ಎಂದು ಊರಿಗೆ ಹೋಗುತ್ತಾಳೆ. ಗಂಡ ಒಬ್ಬ ಸುಂದರ ಯುವಕ. ಅವನ ಗೆಳೆಯ ಸಹೋದ್ಯೋಗಿ ಇವನಿಗೆ ಲೈಫು ಎಂಜಾಯ್ ಮಾಡಲು ಇದೇ ಅವಕಾಶ ಎಂದು ಹೇಳಿ ವೇಶ್ಯೆಯೊಬ್ಬಳ ನಂಬರ್ ಕೊಡುತ್ತಾನೆ. ಬಹಳವೇ ಆಲೋಚನೆ ಮಾಡಿ ಅವಳ ಬಳಿಗೆ ಹೋಗುತ್ತಾನೆ. ಅವಳ ರೂಮಿನಲ್ಲಿ ಇದ್ದಾಗ ಕರೆಂಟ್ ಹೋಗುತ್ತದೆ. ಮಳೆ ಹೊರಗೆ. ಮಿಂಚಿನ ಬೆಳಕಲ್ಲಿ ಅವಳ ಕೊಲೆ ಆಗಿರುವುದು ಕಾಣುತ್ತದೆ. ಓಡುತ್ತಾನೆ. ಆಗ ಅವನನ್ನು ಕಂಡ ಒಬ್ಬ ಬ್ಲ್ಯಾಕ್ ಮೆಯಿಲರ್ ಬೆದರಿಸುತ್ತಾನೆ. ಆ ನಗರದ ಕೊಳಕು ರಾಜಕೀಯದಲ್ಲಿ ಅವನನ್ನು ಬಲಿಪಶು ಮಾಡಲು ಹುನ್ನಾರ ನಡೆಯುತ್ತದೆ...ಹುಲಿಯನ್ನು ಅದರ ಬಾಲದ ಮೂಲಕ ಹಿಡಿಯುವ ಕೆಲಸ ಇದು...
ನನ್ನ ಫೇವರಿಟ್ ಕಾದಂಬರಿಗಳಲ್ಲಿ ಇದೂ ಒಂದು.
-0-0-0-0-0 -
Comments
Post a Comment