ಯತಿ ಸ್ವಂತೀ -150
30-05-2018
ತಾರೆಯರ ನೋಟ
ನಮ್ಮ ಮೈಸೂರು ರೈಲ್ವೆ ಲೋಕೋ ಕಾಲೋನಿ ಮನೆಯ ಬಳಿ ನಡುರಾತ್ರಿ ಇದ್ದಕ್ಕಿದ್ದಂತೆ ಅನೇಕಾನೇಕ ವಾಹನಗಳು ಬಂದವು.
ನಮ್ಮ ಮನೆಯ ಬಳಿ ರೈಲು ಕಂಬಿಗಳ ಆಚೆ ಈಚೆ ಮುರಿದು ಬಿದ್ದಿದ್ದ ರೈಲಿನ ಬೋಗಿಗಳನ್ನು ಬಳಸಿಕೊಂಡರು ಅಲ್ಲಿಗೆ ವಾಹನಗಳಲ್ಲಿ ಬಂದಿದ್ದ ಸಿನಿಮಾದವರು.
ಕಲಾ ನಿರ್ದೇಶಕರ ಸುಫರ್ದಿಯಲ್ಲಿ ಒಡೆದು ಬಿದ್ದಿದ್ದ ಬೋಗಿಗಳಲ್ಲಿ ಅಲ್ಲಲ್ಲೇ ಜನರನ್ನು ಸತ್ತಂತೆ ಮಲಗಿಸಿ, ಕೆಂಪು ಪೆಯಿಂಟ್ ಸುರಿಸಿ, ಬ್ರೂಟ್ (ಬ್ರೂಟಸ್?) ಎನ್ನುವ ಪ್ರಖರ ದೀಪ ಹಾಕಿ ಶೂಟಿಂಗ್. ಮುಖ್ಯ ನಟರು ಪ್ರಣಯರಾಜ ಶ್ರೀನಾಥ್ ಮತ್ತು ತಮಿಳು ನಟ ವಿಜಯ್ ಕುಮಾರ್ ({ಈಗ ಇವರು ಚರಿತ್ರ ನಟ. ಸಿಂಗಂ ಚಿತ್ರಗಳಲ್ಲಿ ಗೃಹಮಂತ್ರಿ} ಇವರ ಪತ್ನಿ, ಹೆಣ್ಮಕ್ಕಳು ಮತ್ತು ಮಗ ಅರುಣ್ ವಿಜಯ್ ಎಲ್ಲರೂ ನಟರು) ಬಂದಿದ್ದರು. ಅಪಘಾತದ ದೃಶ್ಯ ಚಿತ್ರೀಕರಣ ನಡೆಸಿದರು. ದ್ವಿಭಾಷಾ ಚಿತ್ರಗಳಾದ ನಿರೀಕ್ಷೆ ಮತ್ತು ತೆನ್ನಂಕೀಟ್ರು. ಶ್ರೀನಾಥ್ ನೋಡುವುದೇ ಖುಷಿ ಆಗ ನಮಗೆ. ಬಹಳ ದಿನಗಳ ನಂತರ ನಮ್ಮ ಮನೆ ಬಳಿ ಶೂಟಿಂಗ್!
ಅಮ್ಮ ಹೇಳಿದ್ದರು. ಬಹಳ ಹಿಂದೆ ನಮ್ಮ ರೈಲ್ವೇ ಕ್ವಾರ್ಟರ್ಸ್ ಮನೆಯ ತಾರಸಿಯ ಮೇಲೆ ಧರ್ಮೇಂದ್ರ ಮೊದಮೊದಲು ನಟಿಸಿದ ಶೋಲಾ ಔರ್ ಶಬ್ನಂ ಶೂಟಿಂಗ್ ನಡೆದಿತ್ತಂತೆ. ವಿಲನ್ ನಾಯಕಿಯ ಬೆನ್ನಟ್ಟುವ ದೃಶ್ಯ.
ಇನ್ನೊಮ್ಮೆ ಕುಂಟು ಕಾಲು ಮಾಡಿಕೊಂಡಿದ್ದ ರಾಜಶೇಖರ ನಟಿಸಿದ 'ಅನಿರೀಕ್ಷಿತ' ಸಿನಿಮಾದ ದೃಶ್ಯ ರೈಲ್ವೆ ನಿಲ್ದಾಣದಲ್ಲಿ ನಡೆಯಿತು. ಮಿನುಗುತಾರೆ ಕಲ್ಪನಾ ಮತ್ತು ರಾಜಶೇಖರ್ ನಡುವಿನ ದೃಶ್ಯ ಚಿತ್ರೀಕರಿಸಿದರು.
ಒಮ್ಮೆ ನಟಿ ಲೀಲಾವತಿ ಅವರನ್ನು ರಾತ್ರಿ ಮೈಸೂರು ನಿಲ್ದಾಣದಲ್ಲಿ ರೈಲು ಹತ್ತುವಾಗ ನೋಡಿದ ನೆನಪಿದೆ.
-0-0-0-0-0 -
Comments
Post a Comment